
ಹಾಸನ: ಹೆಸರಾಂತ ಸಾಹಿತಿ, ಪತ್ರಕರ್ತೆ ಬಾನು ಮುಷ್ತಾಕ್ ಅವರು ಬೂಕರ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವುದು ಹಾಸನ ಜಿಲ್ಲೆಗೆ ಹೆಮ್ಮೆ ತಂದಿದ್ದೆ, ಸಾಹಿತ್ಯ ವಲಯ ಸೇರಿದಂತೆ ತವರು ಜಿಲ್ಲಾದ್ಯಂತ ಸಂಭ್ರಮ ಮನೆ ಮಾಡಿದೆ. ಬಾನು ಮುಷ್ತಾಕ್ ಅವರ ಸಣ್ಣ ಕತೆಗಳ ಅನುವಾದಿತ “ಹಾರ್ಟ್ ಲ್ಯಾಂಪ್” ಕವನ ಸಂಕಲನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುನ್ನತ ಗೌರವ ದಕ್ಕಿದೆ. ಈ ಮೂಲಕ ಕನ್ನಡ ನಾಡು-ನುಡಿಯು ಮತ್ತೊಂದು ಗರಿಮೆಗೆ ಪಾತ್ರವಾಗಿರುವ ಸಂದರ್ಭದಲ್ಲಿ ಜಿಲ್ಲೆಯ ಸಾಹಿತ್ಯ, ಸಾಂಸ್ಕೃತಿಕ ವಲಯದಲ್ಲಿ ಸಂತಸದ ವಾತಾವರಣ ಮೂಡಿಸಿದೆ.

j3tvkannada
ಬಾನು ಮುಷ್ತಾಕ್ಗೆ ಬೂಕರ್ ಪ್ರಶಸ್ತಿ ದೊರೆತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕಸಾಪದಲ್ಲಿ ಸಂಭ್ರಮ ಮನೆ ಮಾಡಿದೆ. ಕಸಾಪ ಅಧ್ಯಕ್ಷ ಮಲ್ಲೇಶಗೌಡ ಒಳಗೊಂಡಂತೆ ಪದಾಧಿಕಾರಿಗಳು, ಸಾಹಿತಿಗಳು ಸೇರಿ ಸಿಹಿ ವಿತರಿಸಿ ಸಂಭ್ರಮಿಸಿದರು. ಬಾನು ಅವರ ಸಾಹಿತ್ಯದ ಕೊಡುಗೆ, ಹೋರಾಟ, ಮಹಿಳಾ ಪರ ಚಿಂತನೆ ಕುರಿತು ಹಲವರು ಶ್ಲಾಘಿಸಿ, ಸಾಧನೆಯನ್ನು ಕೊಂಡಾಡಿದರು. ಬಾನು ಮುಷ್ತಾಕ್ಗೆ ಜಿಲ್ಲಾದ್ಯಂತ ಸಾಹಿತ್ಯಾಸಕ್ತರು, ಅಭಿಮಾನಿ ವಲಯದಿಂದ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ. ಬೂಕರ್ ಪ್ರಶಸ್ತಿಯೊಂದಿಗೆ ನಗರಕ್ಕೆ ಹಿಂತಿರುಗಲಿರುವ ಬಾನು ಅವರನ್ನು ಅಭಿನಂದಿಸಲು ಸಜ್ಜಾಗಿದ್ದಾರೆ.
ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ 1970ರ ದಶಕದಲ್ಲಿಯೇ ಸಮಾಜಮುಖಿಯಾಗಿ, ಮಹಿಳಾ ಪರ ಧ್ವನಿಯೊಂದಿಗೆ ಚಳವಳಿ, ಸಾಹಿತ್ಯ, ಪತ್ರಕರ್ತೆ, ವಕೀಲ ವೃತ್ತಿ ಹೀಗೆ ಹಲವು ಜನಪರ ಕಾಳಜಿಯೊಂದಿಗೆ ಬಾನು ಮುಷ್ತಾಕ್ ಗಮನ ಸೆಳೆದವರು. ಅವರು ನಡೆದು ಬಂದ ದಾರಿ, ದಿಟ್ಟ ಹೆಜ್ಜೆಯಿಂದಲೇ ಗುರುತಿಸಿಕೊಂಡವರು. ನೇರ ನುಡಿಯ ಬಾನು ಈ ಎಲ್ಲ ಕಾರಣದಿಂದಲೇ ಜಿಲ್ಲೆಯಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸ್ತ್ರೀಪರ ಚಿಂತಕಿ ಶೋಷಣೆಗೆ ಒಳಗಾದ ಮಹಿಳೆಯರ ಪರವಾಗಿ ನ್ಯಾಯ ಕೊಡಿಸುವಲ್ಲಿ ಮುಂಚೂಣಿಯ ಪಾತ್ರ ವಹಿಸಿದ ಬಾನು ಮುಷ್ತಾಕ್ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಈ ಕಾರಣದಿಂದಲೇ ಜಿಲ್ಲಾದ್ಯಂತ ಸಂಭ್ರಮ ಮೇಳೈಸಿದೆ.

j3tvkannada
ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಜಾಗತಿಕ ಮಟ್ಟದಲ್ಲಿ ಗೌರವ ತಂದುಕೊಟ್ಟ ಕೃತಿಯ ಒಡತಿ ನಮ್ಮ ಜಿಲ್ಲೆಯವರು ಎನ್ನುವುದು ಹಾಸನದ ಹೆಮ್ಮೆ. ಮುಸ್ಲಿಂ ಸಮಾಜದ ಅಸ್ಮಿತೆಯಂತಿರುವ ಈ ಕೃತಿ ಕನ್ನಡ ಮಹಿಳಾ ಸಾಹಿತ್ಯದ ಘನತೆಯನ್ನು ವಿಶ್ವ ಮಾನ್ಯವಾಗಿಸಿದೆ. ಅನುವಾದಕಿ ದೀಪಾ ಬಸ್ತಿ ಮತ್ತು ಕೃತಿಕಾರ್ತಿ ಬಾನು ಮುಷ್ತಾಕ್ ಅವರಿಗೆ ಪ್ರೀತಿಯ ಅಭಿನಂದನೆಗಳು ಎಂದಿದ್ದಾರೆ ನಂದಿನಿ ಹೆದ್ದುರ್ಗ ಸಾಹಿತಿ. ಸಮಾಜದ ಅನಿಷ್ಟ ಪದ್ಧತಿ, ಮಹಿಳಾ ಶೋಷಣೆ, ಸಂಪ್ರದಾಯದ ವಿರುದ್ಧ ಹೋರಾಡಿದ, ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವ ಮನಸ್ಸಿನ ಬಾನು ಮುಷ್ತಾಕ್ಗೆ “ಬೂಕರ್ ಪ್ರಶಸ್ತಿ” ದೊರೆತಿರುವುದು ನನಗೆ ಬಂದಷ್ಟೇ ಸಂತೋಷವಾಗಿದೆ. ಮಹಿಳಾ ಸಂವೇದನೆ, ಸಾಹಿತ್ಯದಲ್ಲಿ ಗಟ್ಟಿತನ ಹೀಗೆ ಎಲ್ಲ ಅರ್ಹತೆಯನ್ನು ಹೊಂದಿದ ಆತ್ಮೀಯ ಬಾನುಗೆ ಅಭಿನಂದನೆ ಎಂದಿದ್ದಾರೆ ಶೈಲಜಾ ಹಾಸನ, ಸಾಹಿತಿ.
ಭಾರತೀಯರಾಗಿ, ಕನ್ನಡಿಗ ಮಹಿಳಾ ಸಾಹಿತಿ, ಹೋರಾಟಗಾರ್ತಿ ಬಾನು ಮಷ್ತಾಕ್ಗೆ ಬೂಕರ್ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ಸಂಗತಿ. ಜಾತಿ, ಮತಗಳ ವಿಭಜನೆ ಸಂದರ್ಭದಲ್ಲಿ ಮಹಿಳಾ ಸಾಹಿತ್ಯಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರೆತಿದ್ದು ಅತೀವ ಸಂತಸ ತಂದಿದೆ ಎಂದಿದ್ದಾರೆ ರೂಪ ಹಾಸನ, ಸಾಹಿತಿ. ಬೂಕರ್ ಪ್ರಶಸ್ತಿಯಿಂದ ಕನ್ನಡಕ್ಕೆ ಜಾಗತಿಕ ಮಟ್ಟದಲ್ಲಿ ಪುಷ್ಟಿ ಸಿಕ್ಕಿದೆ. ಕನ್ನಡದ ಒಳನೋಟಕ್ಕೆ ಸಿಕ್ಕ ಪ್ರಶಸ್ತಿಯೂ ಔದು. ಮಹಿಳಾ ಬರಹಕ್ಕೆ ಸಿಕ್ಕ ಪ್ರಶಸ್ತಿ ದೊಡ್ಡಮಟ್ಟದಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಮಲ್ಲೇಶಗೌಡ, ಕಸಾಪ ಜಿಲ್ಲಾಧ್ಯಕ್ಷರು, ಹಾಸನ.
ಕನ್ನಡ ನಾಡಿನ ಹೆಮ್ಮೆಯ ಸುಪುತ್ರಿ, ಬಾನುಮುಷ್ತಾಕ್ಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ದೊರೆತಿರುವುದು ಕನ್ನಡ ನಾಡಿನ ಹಿರಿಮೆಗೆ ಹೆಮ್ಮೆ ಎನಿಸುತ್ತದೆ. ಈ ಸಂಭ್ರಮದ ಕ್ಷಣವು ಕನ್ನಡ ನಾಡಿನ ಏಳು ಕೋಟಿ ಕನ್ನಡಿಗರಿಗೆ ಸಂತಸ ತಂದಿದೆ.
ಡಾ.ನಾಯಕರಹಳ್ಳಿ ಮಂಜೇಗೌಡ, ನಿಕಟಪೂರ್ವ ಜಿಲ್ಲಾಧ್ಯಕ್ಷರು, ಜಿಲ್ಲಾಕಸಾಪ ಹಾಸನ.