
ಚಿತ್ರದುರ್ಗ: ಕೇವಲ ಮಲೆನಾಡಿನ ರಾಣಿಯಾಗಿದ್ದ ಕಾಳುಮೆಣಸನ್ನು ತಾಲೂಕಿನ ಹಲವು ಪ್ರದೇಶದಲ್ಲಿ ರೈತರು ಅಡಕೆ ಜತೆಗೆ ಉಪ ಆದಾಯದ ಬೆಳೆಯಾಗಿ ಬೆಳೆಯುತ್ತಿದ್ದು, ರೈತರು ನೀರಿನ ಲಭ್ಯತೆಗೆ ಅನುಗುಣವಾಗಿ ವಾಣಿಜ್ಯ ಬೆಳೆಗಳ ಕಡೆ ಮಗ್ಗಲು ಬದಲಿಸುತ್ತಿರುವುದು ಸಂಕೇತವಾಗಿ ಕಾಣುತ್ತಿದೆ.

j3tvkannada
ತಾಲೂಕಿನ ರಂಗಯ್ಯ ನೂರು ಗ್ರಾಮದ ಜಿ. ಶಿವಪ್ರಸಾದ್, ಅಡಕೆಯ ಜೊತೆ ಪರ್ಯಾಯವಾಗಿ ಕಾಳು ಮೆಣಸು ಬೆಳೆದು ಯಶಸ್ಸು ಪಡೆದಿದ್ದಾರೆ. ಪಿ.ಯು.ಸಿ ಓದಿರುವ ರೈತ ಒಟ್ಟು ಎಂಟು ಎಕರೆ ಜಮೀನಿನಲ್ಲಿ 5 ಎಕರೆಯಲ್ಲಿ ಅಡಕೆ ಬೆಳೆಯುತ್ತಿದ್ದಾರೆ. ತಾಲೂಕಿನ ತಂಡಗ ಗ್ರಾಮದ ರೈತ ಕಲ್ಲೇಶ್ ಅವರ ಜಮೀನಿಗೆ ಭೇಟಿ ನೀಡಿದ್ದ ವೇಳೆ ಅವರು ಅನುಸರಿಸಿದ್ದ ಕೃಷಿ ವಿಧಾನವನ್ನು ತಾವು ಅನುಸರಿಸಿ ಕಾಳುಮೆಣಸು ಬೆಳೆಯತ್ತ ಮುಖ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರದಿಂದ ಕಾಳುಮೆಣಸಿನ ಒಂದು ಸಸಿಗೆ 15 ರೂ. ನಂತೆ ತಂದು ಅಡಕೆ ಗಿಡಗಳ ಪಕ್ಕದಲ್ಲಿಯೇ ನಾಟಿ ಮಾಡಿ ಎರಡು ವರ್ಷ ಇದರ ಆರೈಕೆ ಮಾಡಿದರು. ಇದೀಗ ಕಳೆದ 8 ವರ್ಷಗಳಿಂದಲೂ ರೈತರ ಕೈಹಿಡಿದಿದೆ. ಒಂದು ಕಾಲು ಎಕರೆ ಭೂಮಿಗೆ ಮೆಣಸು ನಾಟಿ ಮಾಡಿದ್ದು, ಪ್ರತಿ ವರ್ಷ 1 ರಿಂದ 2 ಕ್ವಿಂಟಾಲ್ ಇಳುವರಿ ಪಡೆಯಲಾಗುತ್ತಿದೆ. ಯಾವುದೇ ವೆಚ್ಚವಿಲ್ಲದೆ ಪ್ರತಿ ವರ್ಷ 1 ಲಕ್ಷ ರೂ. ವರೆಗೂ ಆದಾಯ ಗಳಿಸುತ್ತಿದ್ದಾರೆ.
ಕಾಳುಮೆಣಸಿನ ಆರೈಕೆ ಹೇಗೆ:-
ಸಸಿ ನೆಟ್ಟು ಆರು ಅಡಿ ಬೆಳೆಯುವವರೆಗೂ ಸ್ವಲ್ಪ ಜೋಪಾನ ಮಾಡಬೇಕು. ಆದಾದ ನಂತರ ಬಳ್ಳಿ ಅಡಕೆ ಮರಗಳಿಗೆ ತಾನೆ ಅಂಟಿಕೊಳ್ಳಲಾರಂಭಿಸುತ್ತದೆ. ಕಾಳು ಮೆಣಸು ಹಾಕಿದಾಗಿಂದ ಇಲ್ಲಿಯವರೆಗೂ ಯಾವುದೇ ರೋಗಗಳು ಬಾಧಿಸಿಲ್ಲ. ಯಾವುದೇ ವೆಚ್ಚವೂ ಆಗಿಲ್ಲ. ಅಡಕೆ ಗಿಡಕ್ಕೆ ಕೊಟ್ಟಿಗೆ ಗೊಬ್ಬರ ಹಾಗೂ ಕುರಿ ಗೊಬ್ಬರ ಹಾಕಲಾಗುತ್ತದೆ. ನಿತ್ಯ ಡ್ರಿಪ್ ಮಾಡಿ ನೀರಿನ ವ್ಯವಸ್ಥೆ ಸಹ ಮಾಡಲಾಗಿದೆ. ಅಡಕೆ ಗಿಡಗಳ ಜತೆಗೆ ಕಾಳುಮೆಣಸು ಗಿಡದ ಆರೈಕೆಯೂ ಆಗಿರುತ್ತದೆ ಎನ್ನುತ್ತಾರೆ ರಂಗಯ್ಯನೂರು ರೈತ ಜಿ. ಶಿವಪ್ರಸಾದ್.
ಖರ್ಚಿಲ್ಲದೆ ಹೆಚ್ಚು ಲಾಭ:-
ಕಲ್ಪತರು ನಾಡೆಂದೇ ಪ್ರಸಿದ್ಧವಾದ ಈ ನೆಲದಲ್ಲಿ ತೆಂಗು ಉಳಿದಿದ್ದೇ ಹೆಚ್ಚು. ಬೆಂಕಿರೋಗದಿಂದ ಮರಗಳ ಮಾರಣ ಹೋಮ ಒಂದೆಡೆಯಾದರೆ, ಬೆಲೆ ಕುಸಿತದಿಂದ ತೆಂಗು ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದರು. ಇಂಥ ಸಂಕಷ್ಟಗಳನ್ನೆದುರಿಸಿದ್ದ ನೆಲದಲ್ಲೀಗ ಅಡಕೆ ಜತೆಗೆ ಕಾಳು ಮೆಣಸಿನಂತ ವಾಣಿಜ್ಯ ಬೆಳೆಗಳ ಘಾಟು ಹರಡುತ್ತಿವೆ. ಸೂಕ್ತವಾಗಿ ನಿರ್ವಹಣೆ ಮಾಡಿದರೆ ಯಾವುದೇ ಖರ್ಚಿಲ್ಲದೇ ಪರ್ಯಾಯ ಬೆಳೆಯೂ ಕೈಹಿಡಿಯಬಲ್ಲದು ಎಂಬುದಕ್ಕೆ ಶಿವಪ್ರಸಾದ್ ಉದಾಹರಣೆಯಾಗಿದ್ದು, ಕೇವಲ ಕಾಳು ಮೆಣಸು ಮಾತ್ರವಲ್ಲ ಜೂನ್ ತಿಂಗಳಿಗೆ ಏಲಕ್ಕಿ ಬೆಳೆಯಲು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನುಳಿದ ಭೂಮಿಯಲ್ಲಿ ಏಲಕ್ಕಿ ಜತೆಗೆ ಮೆಲ್ಲಾನಿ ಗೋಲ್ಡ್, ಮಸಾಲೆ ಪದಾರ್ಥ ಬೆಳೆಯುವ ಉದ್ದೇಶ ಹೊಂದಿದ್ದಾರೆ. ಮೂರು ಎಕರೆ ಮಳೆಯಾಶ್ರಿತ ಪ್ರದೇಶದಲ್ಲಿ ರಾಗಿ, ಮೆಕ್ಕೆಜೋಳ ಬೆಳೆಯುವ ಇವರು ರಾಗಿ ಶಿವಣ್ಣ ಅಂತಲೇ ಹೆಸರು ಗಳಿಸಿದ್ದಾರೆ.