
ಉತ್ತರ ಕನ್ನಡ: ರಾಜ್ಯದ ಹಲವು ಕಡೆ ಜೋರು ಮಳೆಯಾಗುತ್ತಿದೆ, ಮಳೆಯಿಂದ ಅನೇಕ ಅವಾಂತರಗಳು ಸೃಷ್ಟಿಯಾಗುತ್ತಿವೆ. ಹೀಗಾಗಿ, ಕಳೆದ ವರ್ಷ ಮಳೆಗಾಲದ ಸಂದರ್ಭದಲ್ಲಿ ಸಂಭವಿಸಿದ್ದ ಶಿರೂರು ಗುಡ್ಡ ಕುಸಿತ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ದುರಂತ ಸಂಭವಿಸಿದಾಗ ಜಿಲ್ಲೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಗುಡ್ಡ ಕುಸಿತಕ್ಕೆ ಶಾಶ್ವತ ಪರಿಹಾರ ನೀಡುವ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಭರವಸೆ ಕಾರ್ಯರೂಪಕ್ಕೆ ಬಂದಿಲ್ಲ.

j3tvkannda
ಕಳೆದ ವರ್ಷ ಸುರಿದ ಅಬ್ಬರದ ಮಳೆಯಿಂದ, ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಸಾವು ನೋವು ಸಂಭವಿಸಿದ್ದವು. ಕಳೆದ ವರ್ಷ ಜಿಲ್ಲೆಯ ಶಿರೂರು ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿದ್ದ 11 ಜನರ ಪೈಕಿ ಇಬ್ಬರ ಸಣ್ಣ ಸುಳಿವು ಕೂಡ ಇದುವರೆಗೂ ಸಿಕ್ಕಿಲ್ಲ. ಇದರ ಬೆನ್ನಲ್ಲೆ ಈ ವರ್ಷ ಮೇ ಎರಡನೇ ವಾರದಿಂದ ರಾಜ್ಯದಲ್ಲಿ ಅಬ್ಬರದ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಹೇಳಿದಂತೆ ಕಳೆದ ಬಾರಿಗಿಂತ, ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿಳುವ ಎಲ್ಲ ಲಕ್ಷಣಗಳು ಕಾಣುತ್ತಿವೆ.
ಈ ವರ್ಷ ಮತ್ತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಅವಾಂತರ ಆಗುವ ಆತಂಕ ಜಿಲ್ಲೆಯ ಜನರನ್ನು ಕಾಡುತ್ತಿದೆ. ಕಳೆದ ವರ್ಷ ಶಿರೂರುಗೆ ಭೇಟಿ ನೀಡಿದ್ದ ಸಿಎಂ ಸಿದ್ಧರಾಮಯ್ಯ ಅವರು, ಜಿಲ್ಲೆಯಲ್ಲಿನ 339 ಗುಡ್ಡ ಕುಸಿತದ ಪೈಕಿ, ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಥಮ ಹಂತದ ಶಾಶ್ವತ ಪರಿಹಾರ ಮಾಡುವ ಭರವಸೆ ನೀಡಿದ್ದರು. ಹಣ ಬಿಡುಗಡೆ ಮಾಡುವುದಾಗಿ ಹೇಳಿ, ಮತ್ತೆ ಸರ್ವೇ ಮಾಡಿಸಿ, ಮೂರು ಬಾರಿ ಜಿಲ್ಲಾಡಳಿತದಿಂದ ಮಾಹಿತಿಯನ್ನು ತರಿಸಿಕೊಂಡಿದ್ದಾರೆ. ಆದರೆ, ಇದುವರೆಗೂ ಒಂದೇ ಒಂದು ರೂಪಾಯಿ ಹಣ ಬಿಡುಗಡೆ ಮಾಡಿಲ್ಲ.
ಇನ್ನೂ ಈ ವಿಚಾರವಾಗಿ ಕಳೆದ ಎರಡು ತಿಂಗಳ ಹಿಂದೆ ಜಿಲ್ಲಾ ಉಸ್ತುವರಿ ಸಚಿವ ಮಂಕಾಳು ವೈದ್ಯರಿಗೆ ಪ್ರಶ್ನಸಿದಾಗ, ರಾಜ್ಯ ಸರ್ಕಾರದಿಂದ 10 ಕೋಟಿ ಹಣ ಬಿಡುಗಡೆ ಆಗಿದ್ದು ಆದಷ್ಟು ಬೇಗ ಕಾಮಗಾರಿ ಆರಂಭ ಮಾಡಲಾಗುವುದು ಎಂದು ತಿಳಿಸಿದ್ದರು. ಈಗ ಮಳೆಗಾಲ ಆರಂಭ ಆಗುತ್ತಿದ್ದಂತೆ ಯೂಟರ್ನ್ ಹೊಡೆದಿರುವ ಸಚಿವ ಮಂಕಾಳು ವೈದ್ಯ, ಗುಡ್ಡ ಕುಸಿತ ತಡೆಗೆ ಎನ್.ಎಚ್.ಎ.ಐ ಮತ್ತು ಕೇಂದ್ರ ಸರ್ಕಾರ ಕಾಳಜಿ ವಹಿಸಬೇಕಿತ್ತು. ಆದರೆ, ಇದುವರೆಗೂ ಏನನ್ನು ಮಾಡಿಲ್ಲ ಎಂದು ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುತ್ತಿದ್ದಾರೆ.
ರಾಜ್ಯದಲ್ಲಿ ಭಾರಿ ಮಳೆ ಸುರಿಯುತ್ತಿರುವ ಬೆನ್ನಲ್ಲೆ, ಉತ್ತರ ಕನ್ನಡ ಜಿಲ್ಲೆಯ ಜನರ ರಕ್ಷಣೆಗೆ ಮುಂದಾಗಬೇಕಿದ್ದ ಸಚಿವ ಮಂಕಾಳು ವೈದ್ಯ, ರಾಜಕೀಯ ಮಾಡಲು ಮುಂದಾಗಿರುವುದು ನಿಜಕ್ಕೂ ವಿಷಾದನೀಯ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.