
ಚಾಮರಾಜನಗರ : ಕಳೆದ 2023 ರ ಜೂ. 11 ರಂದು ಶಕ್ತಿ ಯೋಜನೆಗೆ ಚಾಲನೆ ದೊರೆತ್ತಿದ್ದು, ಅಲ್ಲಿಂದ ಏಪ್ರಿಲ್ ಅಂತ್ಯದವರೆಗೆ ಚಾಮರಾಜನಗರ ಕೆ.ಎಸ್.ಆರ್.ಟಿ.ಸಿ ವಿಭಾಗದಲ್ಲಿ ಒಟ್ಟು 14,82,71,026 ಪ್ರಯಾಣಿಕರು ಪ್ರಯಾಣಿಸಿದ್ದು, ಆ ಪೈಕಿ 9,08,26,299 ಮಹಿಳಾ ಪ್ರಯಾಣಿಕರೇ ಆಗಿದ್ದಾರೆ.

j3tvkannada
ಕೆ.ಎಸ್.ಆರ್.ಟಿ.ಸಿಗೆ ಒಟ್ಟಾರೆ 551,59,86,205 ರೂ. ಆದಾಯ ಬಂದಿದೆ. ಇದರಲ್ಲಿ ಮಹಿಳಾ ಪ್ರಯಾಣಿಕರು ಸಂಚರಿಸಿದ ಫಲವಾಗಿ ಬಂದ ಆದಾಯ 328,16,38,236 ರೂ. ಗಳಾಗಿವೆ ಎಂದು ಇಲಾಖೆ ತಿಳಿಸಿದೆ.
ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ರಾಜ್ಯ ಸರಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಶಕ್ತಿ ಯೋಜನೆಗೆ ಜಿಲ್ಲೆಯಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶಕ್ತಿ ಯೋಜನೆ ಜಾರಿಯಾದ ಬಳಿಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಸಂಚರಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.
ಉದ್ಯೋಗ, ಶಿಕ್ಷಣ, ಪ್ರವಾಸಿತಾಣಗಳು, ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು ಸೇರಿದಂತೆ ಇನ್ನಿತರ ಕಡೆ ಪ್ರಯಾಣ ಬೆಳೆಸಲು ಶಕ್ತಿ ಯೋಜನೆಯಡಿ ಅನುಕೂಲವಾಗಿದೆ. ನಗರ ಸಾರಿಗೆ, ಸಾಮಾನ್ಯ ಮತ್ತು ವೇಗದೂತ ಬಸ್ಸುಗಳಲ್ಲಿ ರಾಜ್ಯಾದ್ಯಂತ ಪ್ರಯಾಣಿಸಲು ಮಹಿಳೆಯರಿಗೆ ಅವಕಾಶವಾಗಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.
ಶಕ್ತಿ ಯೋಜನೆ ವಿಶೇಷವಾಗಿ ಮಹಿಳಾ ಉದ್ಯೋಗಿಗಳಿಗೆ ನೆರವಾಗುತ್ತಿದೆ. ಖಾಸಗಿ ಕಂಪನಿ, ಸಣ್ಣಪುಟ್ಟ ಉದ್ದಿಮೆ, ಅಂಗಡಿಗಳಲ್ಲಿ ಕೆಲಸ ಮಾಡಲು ಬೇರೆ ಸ್ಥಳಗಳಿಗೆ ಹೋಗಿ ಬರಲು ಬಸ್ ಪ್ರಯಾಣಕ್ಕಾಗಿ ತಿಂಗಳ ವೇತನದಲ್ಲಿ ಹೆಚ್ಚು ವೆಚ್ಚ ಮಾಡಬೇಕಿತ್ತು. ಸರಕಾರ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿರುವುದರಿಂದ ಬಸ್ ಪ್ರಯಾಣದ ಟಿಕೆಟ್ ವೆಚ್ಚದ ಹಣ ಉಳಿತಾಯವಾಗುತ್ತಿದ್ದು, ಇದರಿಂದ ಕುಟುಂಬದ ಆರ್ಥಿಕ ಹೊರೆ ಭರಿಸಲು ಸಹಾಯವಾಗಿದೆ.
ಶಕ್ತಿ ಯೋಜನೆ ಜಾರಿಯಾದ ಬಳಿಕ ಮಲೆ ಮಹದೇಶ್ವರ ಬೆಟ್ಟ, ಯಳಂದೂರು ತಾಲೂಕಿನ ಬಿಳಿಗಿರ ರಂಗನಬೆಟ್ಟ, ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭೇಟಿ ನೀಡಿದ್ದಾರೆ. ಶಕ್ತಿ ಯೋಜನೆಯಿಂದ ಧಾರ್ಮಿಕ ಕ್ಷೇತ್ರಗಳು, ಇನ್ನಿತರ ಪ್ರವಾಸಿ ತಾಣಗಳಲ್ಲಿ, ಜಾತ್ರಾ ಮಹೋತ್ಸವಗಳಲ್ಲಿ ಸಹಜವಾಗಿ ವ್ಯಾಪಾರ, ವಹಿವಾಟು ಬಿರುಸುಗೊಂಡಿರುವುದು ಕಂಡು ಬಂದಿದೆ ಎಂದು ಪ್ರಕಟಣೆ ತಿಳಿಸಿದೆ.
ಶಕ್ತಿ ಯೋಜನೆ ಅನುಷ್ಠಾನ ನಂತರ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಮಲೆ ಮಹದೇಶ್ವರಬೆಟ್ಟಕ್ಕೆ ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರು ಬರುತ್ತಿದ್ದು, ಅಮಾವಾಸ್ಯೆ, ಶಿವರಾತ್ರಿ, ಯುಗಾದಿ, ದೀಪಾವಳಿ ಜಾತ್ರಾ ಸಂದರ್ಭಗಳಲ್ಲಂತೂ ಮಹಿಳಾ ಪ್ರಯಾಣಿಕರು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.