
ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಗಳಲ್ಲಿಯೇ ಚಿನ್ನಾಭರಣ ದೋಚಿದ್ದ ಮೂವರು ಮಹಿಳೆಯರನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಿರುವ ನಗರ ಪೊಲೀಸರು, ಸುಮಾರು 30 ಲಕ್ಷ ರೂ. ಮೌಲ್ಯದ ಆಭರಣ ಜಪ್ತಿ ಮಾಡಿದ್ದಾರೆ. ಸಾಫ್ಟ್ವೇರ್ ಎಂಜಿನಿಯರ್ ಅಂಜಲಿ ಎಂಬುವವರ ಮನೆಯಲ್ಲಿ ಕೆಲಸ ಮಾಡುವ ವೇಳೆ ಮನೆ ಕೀ ಕದ್ದು, ಮಾಲೀಕರಿಲ್ಲದ ವೇಳೆ ಚಿನ್ನಾಭರಣ ಕಳ್ಳತನ ಮಾಡಿದ್ದ ವರಲಕ್ಷ್ಮೀ (38) ಎಂಬಾಕೆಯನ್ನು ಎಚ್.ಎ.ಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

j3tvkannada
ಬಸವನಗರದ ನಿವಾಸಿ ಅಂಜಲಿ ಅವರ ಮನೆಯಲ್ಲಿ ಒಂದೂವರೆ ತಿಂಗಳ ಹಿಂದೆ ರಮೇಶ್ ನಗರದ ನಿವಾಸಿ ವರಲಕ್ಷ್ಮಿ ಮನೆ ಕೆಲಸಕ್ಕೆ ಸೇರಿದ್ದಳು. ಕೆಲದಿನಗಳ ಹಿಂದೆ ಮನೆಯ ಮುಖ್ಯದ್ವಾರದ ಒಂದು ಕೀ ಕಳವು ಮಾಡಿ ತನ್ನ ಬಳಿಯೇ ಇಟ್ಟು ಕೊಂಡಿದ್ದಳು.
ಇತ್ತೀಚೆಗೆ ಹೊಸ ಕಾರು ಖರೀದಿಸಿದ್ದ ಅಂಜಲಿ ದಂಪತಿ ಕುಟುಂಬ ಸಮೇತ ಪೂಜೆ ಸಲುವಾಗಿ ಮೇ 10ರಂದು ದೇವಾಲಯಕ್ಕೆ ತೆರಳಿದ್ದರು. ಆ ದಿನ ಕೆಲಸಕ್ಕೆ ಬರುವುದು ಬೇಡ ಎಂದು ವರಲಕ್ಷ್ಮಿಗೆ ತಿಳಿಸಿದ್ದರು. ಈ ಸಮಯಕ್ಕಾಗಿಯೇ ಹೊಂಚು ಹಾಕಿದ್ದ ವರಲಕ್ಷ್ಮಿ ಅದೇ ದಿನ ಮನೆಯ ಬಳಿ ಆಗಮಿಸಿ ತನ್ನ ಬಳಿ ಇದ್ದ ಕೀ ಬಳಸಿ ಒಳ ಪ್ರವೇಶಿಸಿ ಸುಮಾರು 12 ಲಕ್ಷ ರೂ.ಮೌಲ್ಯದ ಆಭರಣ ಕಳವು ಮಾಡಿಕೊಂಡು ಹೋಗಿದ್ದಳು ಎಂದು ಪೊಲೀಸರು ತಿಳಿಸಿದರು.
ಬಾಲಕಿ ಹೇಳಿದ ಸತ್ಯ:- ಪೂಜೆ ಮುಗಿಸಿಕೊಂಡು ಮನೆಗೆ ಬಂದ ಅಂಜಲಿ ದಂಪತಿ ಮನೆಯ ಕಬೋರ್ಡ್ನಲ್ಲಿದ್ದ ಆಭರಣ ಕಳವು ಕಂಡು ಆತಂಕಗೊಂಡಿದ್ದಾರೆ. ಈ ಬಗ್ಗೆ ಅಕ್ಕ-ಪಕ್ಕದ ಮನೆಯವರನ್ನು ವಿಚಾರಿಸಿದಾಗ ಪಕ್ಕದ ಮನೆಯ ಬಾಲಕಿ, ಮಧ್ಯಾಹ್ನ ಮನೆ ಕೆಲಸದಾಕೆ ವರಲಕ್ಷ್ಮಿ ಮನೆಗೆ ಬಂದು ಹೋಗಿದ್ದರು ಎಂದು ತಿಳಿಸಿದ್ದಳು. ಈ ನಿಟ್ಟಿನಲ್ಲಿ ಆಕೆ ಬಗ್ಗೆ ಶಂಕೆ ವ್ಯಕ್ತಪಡಿಸಿ ಅಂಜಲಿ ಪೊಲೀಸರಿಗೆ ದೂರು ನೀಡಿದ್ದರು.
ಉದ್ಯಮಿ ಮನೆಯಲ್ಲಿ ಚಿನ್ನಾಭರಣ ಹಾಗೂ ನಗದು ಕದ್ದಿದ್ದ ಇಟ್ಟಮಡು ನಿವಾಸಿ ಕಮಲಾ (35) ಎಂಬಾಕೆಯನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬನಶಂಕರಿ 3ನೇ ಹಂತದಲ್ಲಿ ವಾಸವಿರುವ ಉದ್ಯಮಿಯೊಬ್ಬರ ಮನೆಯಲ್ಲಿಎರಡು ವರ್ಷಗಳಿಂದ ಮನೆ ಕೆಲಸ ಮಾಡುತ್ತಿದ್ದ ಕಮಲಾ, ಏಪ್ರಿಲ್ ತಿಂಗಳಿನಲ್ಲಿ ಮನೆಯ ಬೀರುವಿನ ಮೇಲಿಟ್ಟಿದ್ದ ಬ್ಯಾಗ್ನಲ್ಲಿದ್ದ 50 ಗ್ರಾಂ ಆಭರಣ ಹಾಗೂ 6.50 ಲಕ್ಷ ರೂ. ನಗದು ಕಳವು ಮಾಡಿದ್ದಳು. ಬಳಿಕ ತನಗೆ ಏನೂ ಗೊತ್ತಿಲ್ಲದವಳಂತೆ ಪುನಃ ಕೆಲಸಕ್ಕೆ ಹೋಗುತ್ತಿದ್ದಳು. ಇತ್ತೀಚೆಗೆ ಉದ್ಯಮಿ ಬ್ಯಾಗ್ ತೆರೆದು ನೋಡಿದಾಗ ಆಭರಣ ಹಾಗೂ ಹಣ ಕಳವಾಗಿರುವುದು ಗೊತ್ತಾಗಿ ಮನೆ ಕೆಲಸದಾಕೆ ಕಮಲಾ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ಆರೋಪಿ ಕಮಲಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಳು.
ಆರೋಪಿ ಕಮಲಾ ಕದ್ದ ಆಭರಣವನ್ನು ಜ್ಯುವೆಲರಿ ಶಾಪ್ನಲ್ಲಿ ಅಡವಿಟ್ಟು ಹಣ ಪಡೆದಿದ್ದಳು. ನಗದು ಖರ್ಚು ಮಾಡಿಕೊಂಡಿದ್ದಳು. ಆರೋಪಿ ಬಳಿ 3.86 ಲಕ್ಷ ರೂ.ನಗದು, 48 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಕಳವಿನ ಬಳಿಕ ಊರಿಗೆ ಪರಾರಿ:- ಕೆಲಸ ಮಾಡುತ್ತಿದ್ದ ಮನೆಯಲ್ಲಿಯೇ ಆಭರಣ ಕದ್ದು ಸ್ವಂತ ಊರಿಗೆ ಪರಾರಿಯಾಗಿದ್ದ ಸೋಮಸಂದ್ರ ಪಾಳ್ಯದ ನಿವಾಸಿ ಶಾಲಿನಿ ಎಂಬಾಕೆಯನ್ನು ಎಚ್.ಎಸ್.ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಎಚ್.ಎಸ್.ಆರ್ ಲೇಔಟ್ 1ನೇ ಹಂತದಲ್ಲಿ ನೆಲೆಸಿರುವ ಖಾಸಗಿ ಕಂಪನಿಯೊಂದರ ಉದ್ಯೋಗಿಯೊಬ್ಬರ ಮನೆಯಲ್ಲಿ ಮೂರು ವರ್ಷಗಳಿಂದ ಶಾಲಿನಿ ಕೆಲಸ ಮಾಡುತ್ತಿದ್ದಳು. ಏಪ್ರಿಲ್ನಲ್ಲಿ ಆಭರಣ ಕದ್ದಿದ್ದ ಶಾಲಿನಿ, ಕೆಲಸದ ನಿಮಿತ್ತ ಸ್ವಂತ ಊರಾದ ಚಿತ್ರದುರ್ಗದ ಹೊಳಲ್ಕೆರೆಗೆ ಹೋಗುವುದಾಗಿ ತಿಳಿಸಿ ಹೋಗಿದ್ದು ಪುನಃ ವಾಪಸ್ ಬಂದಿರಲಿಲ್ಲ.
ಇತ್ತೀಚೆಗೆ ಆಭರಣ ಕಳವಿನ ಬಗ್ಗೆ ಗೊತ್ತಾಗಿ ಮಾಲೀಕರು ದೂರು ನೀಡಿದ್ದರು. ಆರೋಪಿತೆ ಶಾಲಿನಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಸಿದಾಗ ಕಳ್ಳತನದ ಬಗ್ಗೆ ತಪ್ಪೊಪ್ಪಿಕೊಂಡಿದ್ದಳು. ಆರೋಪಿ ಕದ್ದಿದ್ದ 12 ಲಕ್ಷ ರೂ.ಮೌಲ್ಯದ ಆಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು. ಮತ್ತೊಂದು ಪ್ರಕರಣದಲ್ಲಿ ಕೆಲಸ ಮಾಡುತ್ತಿದ್ದ ಜ್ಯುವೆಲರಿ ಶಾಪ್ನಲ್ಲಿ ಮೂರು ಕೆ.ಜಿ. ಬೆಳ್ಳಿ ವಸ್ತು ಕದ್ದಿದ್ದ ಕೆಲಸಗಾರನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.