
ಹಾಸನ:ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ಭವಿಸಿರುವ ಯುದ್ಧ ಸನ್ನಿವೇಶದ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಐವರು ಯೋಧರು ರಜೆ ಮೊಟಕುಗೊಳಿಸಿ ಕರ್ತವ್ಯಕ್ಕೆ ಮರಳಿದ್ದಾರೆ.

j3tvkannada.in
ಹೊಳೆನರಸೀಪುರ ಮತ್ತು ಅರಸೀಕೆರೆ ತಾಲ್ಲೂಕಿನ ಈ ಯೋಧರ ಕ್ರಮವನ್ನು ಸ್ಥಳೀಯರು ಶ್ಲಾಘಿಸಿದ್ದಾರೆ. ದೇಶದ ಸೇವೆ ಮೇಲು ಎಂಬ ಧ್ಯೇಯವನ್ನು ಮುಡಿಗೇರಿಸಿಕೊಂಡ ಈ ಯೋಧರ ಕ್ರಿಯೆ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ. ಹೊಳೆನರಸೀಪುರ ತಾಲ್ಲೂಕಿನ ಉಣ್ಣೆನಹಳ್ಳಿ ಗ್ರಾಮದ ಸಹೋದರರಾದ ಸುದರ್ಶನ್ ಮತ್ತು ಮಧುಕುಮಾರ್ ರಜೆಗಾಗಿ ಗ್ರಾಮಕ್ಕೆ ಬಂದು ಕೆಲವೇ ದಿನ ಕಳೆದಿದ್ದರು.
ಆದರೂ ಕೂಡಲೇ ಬಂದ ಸೇನೆಯ ಕರೆಯ ಮೇರೆಗೆ ಕರ್ತವ್ಯಕ್ಕೆ ಹೊರಟಿದ್ದಾರೆ. ಸುದರ್ಶನ್ ಬಿ.ಎಸ್.ಎಫ್.ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಮಧುಕುಮಾರ್ ಭಾರತೀಯ ಭೂಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದೇ ರೀತಿ ಅರಸೀಕೆರೆ ತಾಲ್ಲೂಕಿನ ಹರಪನಹಳ್ಳಿ, ಬಸವನಪುರ ಮತ್ತು ಹರಿಹರಪುರ ಗ್ರಾಮಗಳ ಯೋಧರಾದ ಸಂಜೀವ್ ನಾಯ್ಕ್, ದಿನೇಶ್ ನಾಯ್ಕ್ ಮತ್ತು ಹರೀಶ್ ನಾಯ್ಕ್ ಕೂಡ ತಮ್ಮ ರಜೆಯನ್ನು ಮುಕ್ತಾಯಗೊಳಿಸಿ ಸೇನೆಯ ಕರ್ತವ್ಯಕ್ಕೆ ಮರಳಿದ್ದಾರೆ.
ದೇಶಕ್ಕೆ ಬದ್ಧರಾಗಿರುವ ಈ ಯೋಧರು ತಮ್ಮ ಕುಟುಂಬ ಮತ್ತು ಗ್ರಾಮವನ್ನು ತಾತ್ಕಾಲಿಕವಾಗಿ ಬಿಡುವ ನಿರ್ಧಾರ ತೆಗೆದುಕೊಂಡಿದ್ದಾರೆ.ಇನ್ನು ರೈಲ್ವೇ ನಿಲ್ದಾಣದಲ್ಲಿ ಈ ಮೂವರು ಯೋಧರನ್ನು ಬೀಳ್ಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಗೃಹಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಅವರು ಇವರನ್ನು ಸನ್ಮಾನಿಸಿ ಶುಭಾಷಯ ಕೋರಿದರು. ದೇಶಕ್ಕಾಗಿ ಸದುದ್ದೇಶದಿಂದ ರಜೆಯನ್ನು ತ್ಯಜಿಸಿ ಕರ್ತವ್ಯಕ್ಕೆ ಮರಳಿರುವ ಈ ಯೋಧರು ನಮ್ಮೆಲ್ಲರ ಹೆಮ್ಮೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.