
ಉಡುಪಿ: ದೇಶ ಬಾಂಧವರನ್ನು ರಕ್ಷಿಸಲು ಗಡಿಯಲ್ಲಿ ಶತ್ರುಗಳ ದಾಳಿಗೆ ಎದೆಯೊಡ್ಡಿ ಹೋರಾಡುವ ವೀರ ಯೋಧರ ತ್ಯಾಗ, ಬಲಿದಾನಗಳನ್ನು ಬಣ್ಣಿಸಲು ಪದಗಳು ಸಾಲದು. ಅಂಥ ಯೋಧರಿಗಾಗಿ ನಾವೇನು ಮಾಡಬಲ್ಲೆವು? ಇಂಥದ್ದೊಂದು ಪ್ರಶ್ನೆಗೆ ಉಡುಪಿಯ ಗ್ರಾಮವೊಂದು ಇಡೀ ದೇಶಕ್ಕೆ ಮಾದರಿಯಾಗುವಂಥ ಉತ್ತರವನ್ನು ಕೊಟ್ಟಿದೆ.

j3tvkannada
ಉಡುಪಿಯ ಕಾಪು ತಾಲೂಕಿನ ಮಜೂರು ಗ್ರಾಮ ಪಂಚಾಯ್ತಿಯು ತನ್ನ ವಾರ್ಷಿಕ ಬಜೆಟ್ ನಲ್ಲಿ 10 ಲಕ್ಷ ರೂ.ಗಳನ್ನು ಭಾರತೀಯ ಸೇನೆಗೆ ನೀಡುವ ಐತಿಹಾಸಿಕ ನಿರ್ಧಾರವನ್ನು ಮಾಡಿದೆ. ಈ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹೇರೂರು, ಪಾದೂರು ಎಂಬ ಕಂದಾಯ ಹಳ್ಳಿಗಳಿವೆ.
ಗ್ರಾಮ ಪಂಚಾಯ್ತಿಯ ಈ ನಿರ್ಧಾರದ ಬಗ್ಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ ವಳದೂರು, ಉಪಾಧ್ಯಕ್ಷರಾದ ಮಂಜುಳಾ ಆಚಾರ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಏ. 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿದ್ದು ನಮ್ಮೆಲ್ಲರಿಗೂ ತುಂಬಾ ದುಃಖ ತಂದಿತ್ತು. ಆನಂತರ, ಭಾರತವು ಪಾಕಿಸ್ತಾನದಲ್ಲಿರುವ ಉಗ್ರರಿಗೆ ತಕ್ಕ ಪಾಠ ಕಲಿಸಲು ಮುಂದಾಗಿದೆ. ಉಗ್ರರ ನೆಲೆಗಳನ್ನು ಧ್ವಂಸ ಮಾಡುವುದರ ಜೊತೆಗೆ ಪಾಕಿಸ್ತಾನಕ್ಕೆ ಸೂಕ್ತ ಪಾಠ ಕಲಿಸುತ್ತಿದೆ. ಇದು ನಮಗೆಲ್ಲರಿಗೂ ಖುಷಿ ತಂದಿದ್ದು, ಆ ಖುಷಿಯ ಹಿನ್ನೆಲೆಯಲ್ಲಿ ನಮ್ಮ ಗ್ರಾ.ಪಂ ನ ವಾರ್ಷಿಕ ಬಜೆಟ್ ನಲ್ಲಿ ಭಾರತೀಯ ಸೇನೆಗೆ 10 ಲಕ್ಷ ರೂ. ಮೀಸಲಿಡಲು ನಿರ್ಧರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗ್ರಾಮ ಪಂಚಾಯ್ತಿಯ ನಿರ್ಧಾರವನ್ನು ಮುಕ್ತ ಕಂಠದಿಂದ ಶ್ಲಾಘಿಸಿರುವ ಕಾಪು ಶಾಸಕರಾದ ಸುರೇಶ್ ಶೆಟ್ಟಿ. ಬಹುಶಃ ಗ್ರಾಮ ಪಂಚಾಯ್ತಿಯೊಂದು ತನ್ನ ವಾರ್ಷಿಕ ಬಜೆಟ್ಟಿನಲ್ಲಿ ಸೇನೆಗಾಗಿ 10 ಲಕ್ಷ ರೂ.ಗಳನ್ನು ಮೀಸಲಿಡುವ ನಿರ್ಧಾರ ಕೈಗೊಂಡಿರುವುದು ದೇಶದಲ್ಲೇ ಮೊದಲು ಎಂದಿದ್ದಾರೆ. ದೇಶದ ನಾಗರಿಕರ ಸುರಕ್ಷತೆಗಾಗಿ ಭಾರತವು ಯುದ್ಧದಂಥ ದೊಡ್ಡ ಸಾಹಸಕ್ಕೆ ಕೈ ಹಾಕಿದಾಗ ಆ ಪ್ರಯತ್ನಕ್ಕೆ ಭಾರತೀಯರಾದ ನಾವೆಲ್ಲರೂ ಕೈ ಜೋಡಿಸಬೇಕು. ಮಜೂರು ಗ್ರಾಮ ಪಂಚಾಯ್ತಿ ಮಾಡಿರುವ ಈ ಕಾರ್ಯ ಇತರೆ ಗ್ರಾಮ ಪಂಚಾಯ್ತಿಗಳಿಗೂ ಮಾದರಿಯಾಗಲಿ ಎಂದು ಅವರು ಆಶಿಸಿದ್ದಾರೆ.