
ಮಂಡ್ಯ: ತುರ್ತು ಸಂದರ್ಭಗಳಲ್ಲಿ ಅಣೆಕಟ್ಟು ರಕ್ಷಣೆ ಮಾಡುವ ಬಗ್ಗೆ ಸಾರ್ವಜನಿಕರು, ಪ್ರವಾಸಿಗರಿಗೆ ಜಾಗೃತಿ ಮೂಡಿಸಲು ಮೇ 11ರಂದು ಕೆಆರ್ಎಸ್ ಬೃಂದಾವನ ಉದ್ಯಾನವನದಲ್ಲಿ ʻಆಪರೇಷನ್ ಅಭ್ಯಾಸ್ʼ ಅಡಿಯಲ್ಲಿ ಅಣಕು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ 4 ಗಂಟೆಯಿಂದ 7 ಗಂಟೆ ವರೆಗೆ ಅಣಕು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಇದು ಜಾಗೃತಿ ಉದ್ದೇಶದಿಂದ ಮಾಡಲಾಗುತ್ತಿದ್ದು, ಸಾರ್ವಜನಿಕರು, ಪ್ರವಾಸಿಗರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಿಳಿಸಿದ್ದಾರೆ. ಮಂಡ್ಯ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಂಕಿ ಅನಾಹುತಗಳು ತುರ್ತು ಸಂದರ್ಭದಲ್ಲಿ ಜನರು ಗಾಬರಿ ಅಥವಾ ಆತಂಕಕ್ಕೆ ಒಳಗಾಗದಂತೆ ಆತ್ಮ ವಿಶ್ವಾಸ ತುಂಬಿ, ಅರಿವು ಮೂಡಿಸುವ ಉದ್ದೇಶದಿಂದ ಅಣುಕು ಪ್ರದರ್ಶನ ಆಯೋಜಿಸಲಾಗುತ್ತಿದೆ. ಅಲ್ಲದೇ ತುರ್ತು ಕಾರ್ಯಾಚರಣೆ ವೇಳೆ ನಾಗರಿಕರ ರಕ್ಷಣೆ, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಿಕೆ, ಗಾಯಗೊಂಡವರಿಗೆ ಆಸ್ಪತ್ರೆಗೆ ಸ್ಥಳಾಂತರಿಸುವ ಕುರಿತು ಹಾಗೂ ಬ್ಲಾಕ್ ಔಟ್ ಚಟುವಟಿಕೆಗಳ ಬಗ್ಗೆ ಅಣುಕು ಪ್ರದರ್ಶನ ಮಾಡಲಾಗುತ್ತದೆ. ಜನರು ಜನತೆ ಯಾವುದೇ ರೀತಿಯ ಗಾಬರಿ, ಆತಂಕಕ್ಕೆ ಒಳಗಾಗದೇ ಜಿಲ್ಲಾಡಳಿತದೊಂದಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಇದೇ ವೇಳೆ ಅಣುಕು ಕಾರ್ಯಾಚರಣೆಗೆ ವಾರ್ನಿಂಗ್ ಟೀಂ, ಕಂಟ್ರೋಲ್ ರೂಂ, ಇವ್ಯಾಕುಯೇಷನ್ ಟೀಂ (ಸ್ಥಳಾಂತರಿಸುವ ರಕ್ಷಣಾ ತಂಡ), ಅಗ್ನಿ ಶಾಮಕ ದಳ, ಎನ್ಸಿಸಿ ತಂಡ, ಹೋಂ ಗಾರ್ಡ್ಸ್, ಪೊಲೀಸ್ ಇಲಾಖೆ, ಪ್ರಥಮ ಚಿಕಿತ್ಸೆ ತಂಡ, ವೈದ್ಯಕೀಯ ತಂಡ, ಸಾರಿಗೆ ತಂಡ, ಸಂವಹನ ತಂಡಗಳನ್ನು ರಚಿಸಿ ಅಧಿಕಾರಿಗಳಿಗೆ ಜವಾಬ್ದಾರಿಗಳನ್ನು ವಹಿಸಿದರು.