
ಶಿವಮೊಗ್ಗ: ಭದ್ರಾ ಬಲದಂಡೆ ನಾಲೆಗೆ ಕಾರು ಉರುಳಿ ಬಿದ್ದು, ಚಾಲಕ ಮೃತಪಟ್ಟಿದ್ದಾರೆ. ಹೊಳೆಹೊನ್ನೂರು ಸಮೀಪದ ದಾನವಾಡಿ ಗ್ರಾಮದಲ್ಲಿ ಹಾದು ಹೋಗಿರುವ ನಾಲೆಯಲ್ಲಿ ಘಟನೆ ಸಂಭವಿಸಿದೆ.

j3tvkannada
ಹೊಸದುರ್ಗ ತಾಲೂಕು ಕಾಸಪ್ಪನಹಳ್ಳಿ ಗ್ರಾಮದ ಭೋಜರಾಜ್ (32) ಮೃತಪಟ್ಟವರು. ಗುರುವಾರ ಬೆಳಗ್ಗೆಯಿಂದ ಕಾರು ದಾನವಾಡಿ ಗ್ರಾಮದಲ್ಲಿ ಓಡಾಡಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಧ್ಯಾಹ್ನದ ನಂತರ ಗ್ರಾಮದ ದೊಡ್ಡ ನಾಲೆ ಏರಿ ಮೇಲೆ ಹೋಗಿದೆ. ಸಂಜೆ ಏರಿಯಿಂದ ನಾಲೆಗೆ ಕಾರು ಉರುಳಿದ್ದನ್ನು ಸ್ಥಳೀಯ ಯುವಕರು ನೋಡಿದ್ದಾರೆ.
ಕಾರು ಮೇಲೆತ್ತಲು ಈಶ್ವರ್ ಮಲ್ಪೆ ತಂಡ:-
ಕ್ಷಣಾರ್ಧದಲ್ಲಿ ಕಾರು ಮುಳುಗಿದ್ದು, ತಕ್ಷಣ ಗ್ರಾಮಸ್ಥರು, ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ಪೊಲೀಸ್ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದು, ಕಾರು ಪತ್ತೆಯಾದರೂ ಮೇಲೆತ್ತಲು ಸಾಧ್ಯವಾಗಲಿಲ್ಲ. ಶುಕ್ರವಾರ ಈಜು ತಜ್ಞ ಮಲ್ಪೆ ಈಶ್ವರ ಅವರನ್ನು ಕರೆಸಿ ಕಾರು ಮೇಲೆತ್ತಲಾಯಿತು. ಕಾರಿನಲ್ಲಿ ಭೋಜರಾಜ್ ಶವ ದೊರೆತಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಘಟನೆಗೆ ಕಾರಣ ತಿಳಿದುಬಂದಿಲ್ಲ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾನವಾಡಿ ಗ್ರಾಮಸ್ಥರು ಮಲ್ಪೆ ಈಶ್ವರ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನಿಸಿದರು.