
ಬೆಂಗಳೂರು ಗ್ರಾಮಾಂತರ: 2024-25ನೇ ಸಾಲಿನ ಮುಂಗಾರು ಋುತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನೋಂದಾಯಿತ ರೈತರಿಂದ ರಾಗಿ ಖರೀದಿಸುವ ಪ್ರಮಾಣವನ್ನು ಹೆಚ್ಚಿಸಲಾಗಿದೆ. ರಾಗಿ ಖರೀದಿ ಕೇಂದ್ರಗಳಿಗೆ ಇನ್ನೂ ರಾಗಿ ನೀಡದ ರೈತರಿಂದ ಮಾತ್ರ ಪ್ರತಿ ಎಕರೆಗೆ 10 ಕ್ವಿಂಟಾಲ್ನಂತೆ ಗರಿಷ್ಠ 30 ಕ್ವಿಂಟಾಲ್ ರಾಗಿಯನ್ನು ಖರೀದಿ ಮಾಡಲಿದ್ದಾರೆ.

j3tvkannada.in
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೆಚ್ಚಾಗಿ ರಾಗಿ ಬೆಳೆಯಲಾಗುತ್ತದೆ. ರಾಗಿ ಬಳಕೆಯೂ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಪ್ರಮುಖ ಬೆಳೆಗಳಲ್ಲಿ ಒಂದಾಗಿರುವ ರಾಗಿ ಬೆಳೆಯನ್ನು ಮುಂಗಾರು ಅವಧಿಯಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ರಾಗಿ ಜತೆಗೆ ಮೆಕ್ಕೆ ಜೋಳ ಸೇರಿದಂತೆ ಇತರೆ ಬೆಳೆಗಳು ಜಿಲ್ಲೆಯಲ್ಲಿ ಬೆಳೆಯುತ್ತಿದ್ದರೂ ರಾಗಿಯೇ ಮುಖ್ಯ ಬೆಳೆಯಾಗಿದೆ. ನೀರಾವರಿ ಆಶ್ರಿತ ಭೂಮಿಗಿಂತ ಮಳೆ ಆಶ್ರಿತ ಭೂಮಿಯಲ್ಲಿ ವಾರ್ಷಿಕ ಬೆಳೆಯನ್ನು ನಂಬಿಕೊಂಡಿರುವ ರೈತರ ಸಂಖ್ಯೆ ಹೆಚ್ಚಿರುವ ಜಿಲ್ಲೆಯಲ್ಲಿ ಮಳೆ ಪ್ರಮಾಣವನ್ನು ಆಧರಿಸಿ ರಾಗಿ ಬೆಳೆ ಇಳುವರಿ ಪಡೆಯಲಾಗುತ್ತದೆ. ಪ್ರತಿ ವರ್ಷ ಮಳೆಯಲ್ಲಿಏರಿಳಿತ ಕಾಣುತ್ತಿರುವ ಪರಿಣಾಮ ನಿರೀಕ್ಷಿತ ಪ್ರಮಾಣದಲ್ಲಿ ರಾಗಿ ಇಳುವರಿ ಸಾಧ್ಯವಾಗುತ್ತಿಲ್ಲ.
2022 ರಲ್ಲಿಉತ್ತಮ ಮಳೆಯ ಪರಿಣಾಮ 1,14,056 ಟನ್ಗಳಷ್ಟು ರಾಗಿ ಉತ್ಪಾದನೆ ಮಾಡಲಾಗಿತ್ತು. ಆ ವರ್ಷದಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲೂಉತ್ತಮ ಇಳುವರಿ ಕಂಡಿದ್ದು ದೊಡ್ಡಬಳ್ಳಾಪುರ 36,080 ಟನ್, ದೇವನಹಳ್ಳಿ 26,335 ಟನ್, ಹೊಸಕೋಟೆ 16,421 ಟನ್, ನೆಲಮಂಗಲ 15,844 ಟನ್ಗಳಷ್ಟು ರಾಗಿ ಉತ್ಪಾದನೆಯಾಗಿತ್ತು. 2023 ಹಾಗೂ 2024 ರಲ್ಲಿನಿರೀಕ್ಷಿತ ಪ್ರಮಾಣದಲ್ಲಿ ರಾಗಿ ಬೆಳೆ ಬೆಳೆಗಾರರ ಕೈಗೆ ಸಿಕ್ಕಿಲ್ಲ.
ಸರಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 2022-23ನೇ ಸಾಲಿನಲ್ಲಿ ಪ್ರತಿ ಕ್ವಿಂಟಾಲ್ಗೆ 3578 ರೂ. ನಿಗದಿಪಡಿಸಲಾಗಿತ್ತು. 2023-24ನೇ ಸಾಲಿನಲ್ಲಿಈ ದರವನ್ನು 3,846 ರೂ.ಗೆ ಹೆಚ್ಚಳ ಮಾಡಲಾಗಿತ್ತು. ಪ್ರಸುತ್ತ ವರ್ಷದಲ್ಲಿ ಕ್ವಿಂಟಾಲ್ ರಾಗಿ ಬೆಲೆಯನ್ನು 4,290 ರೂ.ಗೆ ಬೆಂಬಲ ಬೆಲೆಯನ್ನು ನಿಗದಿ ಮಾಡಲಾಗಿದೆ. ಈ ದರದಲ್ಲಿ ರೈತರಿಂದ ರಾಗಿಯನ್ನು ಖರೀದಿಸಲು ಜಿಲ್ಲೆಯ ನಾಲ್ಕು ತಾಲೂಕು ಕೇಂದ್ರಗಳಲ್ಲಿ ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.
ಜಿಲ್ಲೆಯಲ್ಲಿ ರಾಗಿ ಖರೀದಿಗೆ ಮಾರ್ಚ್ ತಿಂಗಳಲ್ಲಿ ಚಾಲನೆ ನೀಡಲಾಗಿತ್ತು. ರಾಗಿ ಮಾರಾಟ ಮಾಡುವ ರೈತರಿಂದ ಮೊದಲಿಗೆ ಖರೀದಿ ನೋಂದಣಿ ಮಾಡಿಕೊಂಡು ಆನಂತರ ನೋಂದಣಿಯಾದ ರೈತರಿಂದ ರಾಗಿಯನ್ನು ಬೆಂಬಲ ಬೆಲೆಯಲ್ಲಿಖರೀದಿ ಮಾಡಲಾಗುತ್ತಿದೆ. ಮಾರ್ಚ್ 03ರಿಂದ ಏಪ್ರಿಲ್ ಅಂತ್ಯದವರಿಗೆ ಖರೀದಿಗೆ ಅವಕಾಶವನ್ನು ನೀಡಿದ್ದ ಜಿಲ್ಲಾಡಳಿತ ಈಗ ಈ ಅವಧಿಯನ್ನು ಜೂನ್ 30ರವರೆಗೆ ವಿಸ್ತರಣೆ ಮಾಡಿದೆ. ನೋಂದಾಯಿಸಿಕೊಂಡಿರುವ ರೈತರು ನಿಯಾಮಾನುಸಾರ ಈ ಅವಧಿಯೊಳಗೆ ರಾಗಿ ಮಾರಾಟ ಮಾಡಬಹುದಾಗಿದೆ.
ಜಿಲ್ಲೆಯ ನಾಲ್ಕು ತಾಲೂಕುಗಳ ಪೈಕಿ ರಾಗಿ ಖರೀದಿ ಕೇಂದ್ರಗಳಲ್ಲಿರಾಗಿ ಪೂರೈಯಿಸುವುದಾಗಿ ಹೆಸರು ನೋಂದಾಯಿಸಿಕೊಂಡವರಲ್ಲಿ ದೊಡ್ಡಬಳ್ಳಾಪುರ ಭಾಗದ ರೈತರು ಹೆಚ್ಚಾಗಿದ್ದಾರೆ. ರಾಗಿ ಮಾರಾಟದಲ್ಲಿ ಮುಂದಿದ್ದು, ಹೊಸಕೋಟೆ ರೈತರ ನೋಂದಣಿ ಮತ್ತು ರಾಗಿ ಮಾರಾಟದಲ್ಲಿಕಡೆ ಸ್ಥಾನದಲ್ಲಿದೆ. ಹೆಚ್ಚುವರಿಯಾಗಿ 10 ಕ್ವಿಂಟಾಲ್ ರಾಗಿ ಮಾರಾಟ ಮಾಡಲು ರೈತರಿಗೆ ಅವಕಾಶವನ್ನು ಕಲ್ಪಿಸಲಾಗಿದೆ.
ರಾಗಿ ಖರೀದಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲೂಕು ಖರೀದಿ ಅಧಿಕಾರಿಗಳು ದೇವನಹಳ್ಳಿ ತಾಲೂಕಿನ ಎ.ಅಚ್ಯುತ (9900136687), ದೊಡ್ಡಬಳ್ಳಾಪುರ ತಾಲೂಕಿನ ಎಚ್.ಎನ್. ನಾರಾಯಣ (9886141435), ನೆಲಮಂಗಲ ತಾಲೂಕಿನ ವೈ.ಎಸ್.ನಾರಾಯಣ (9482991630), ಹೊಸಕೋಟೆ ತಾಲೂಕಿನ ಶಿವಕುಮಾರ್ (9880361514) ಸಂಪರ್ಕಿಸಬಹುದು.