
ವಿಜಯನಗರ: ರಾಷ್ಟ್ರೀಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಪರಿಷತ್ (ಎನ್ಸಿಇಆರ್ಟಿ) ಈ ಬಾರಿ ಏಳನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಹಂಪಿ ಬಜಾರ್ನ ಮಾಹಿತಿ ನೀಡಿದ್ದು, ವಿಜಯನಗರ ಸಾಮ್ರಾಜ್ಯದಲ್ಲಿನ ವ್ಯಾಪಾರ ವೈಭವವನ್ನು ವಿವರಿಸಲಾಗಿದೆ. ಸಿ.ಬಿ.ಎಸ್.ಸಿ ಪಠ್ಯಕ್ರಮದ ಶಾಲೆಗಳಲ್ಲಿ ಜೂನ್ನಿಂದ ಇದು ಕಲಿಕೆಯ ವಿಷಯವಾಗಲಿದೆ.

j3tvkannada
ಪಠ್ಯದ 12ನೇ ಅಧ್ಯಾಯ ‘ಅಂಡರ್ಸ್ಟಾಂಡಿಂಗ್ ಮಾರ್ಕೆಟ್ಸ್‘ ಶೀರ್ಷಿಕೆಯಲ್ಲಿದ್ದು, ಮಾರುಕಟ್ಟೆ ಎಂದರೆ ಏನು, ಅಲ್ಲಿ ನಡೆಯುವ ವ್ಯವಹಾರಗಳು ಎಂತಹವು, ಬೇಡಿಕೆ, ಪೂರೈಕೆ, ದುಬಾರಿ ಬೆಲೆ, ಅಗ್ಗದ ಬೆಲೆ, ದಿನಸಿ ಅಂಗಡಿಗಳು, ಹಾಗೂ ಇತರ ಎಲ್ಲ ವಿಚಾರಗಳ ಕುರಿತು ಸಚಿತ್ರ ಮಾಹಿತಿ ಇದೆ. ಅಂತರರಾಷ್ಟ್ರೀಯ ವ್ಯಾಪಾರ, ಆಮದು, ರಫ್ತು ಸಹಿತ ಬಹುತೇಕ ಎಸ್.ಎಸ್.ಎ.ಲ್ಸಿ ವಿದ್ಯಾರ್ಥಿಗಳು ಅಥವಾ ಪಿಯು ಹಂತದ ವಿದ್ಯಾರ್ಥಿಗಳು ಕಲಿಯಬಹುದಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಹಂಪಿ ವಿರೂಪಾಕ್ಷ ದೇವಸ್ಥಾನದ ಮುಂಭಾಗದ ಸಾಲು ಮಂಟಪಗಳು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ಬಸವಣ್ಣ ಮಂಟಪ ಮತ್ತು ಹಿಂಭಾಗದ ಮಾತಂಗ ಬೆಟ್ಟದ ನಡುವೆ ಕಂಗೊಳಿಸುವ ಸಾಲು ಮಂಟಪಗಳನ್ನು ಬಿಂಬಿಸುವ ಅತ್ಯಾಕರ್ಷಕ ಚಿತ್ರವನ್ನು ಪಠ್ಯದ ಜತೆಗೆ ನೀಡಲಾಗಿದೆ. ಭಾರತದ ಮಾರುಕಟ್ಟೆ ವ್ಯವಸ್ಥೆಯ ಬಗ್ಗೆ ತಿಳಿಯುವಾಗ 16ನೇ ಶತಮಾನದಲ್ಲಿ ಮಾರುಕಟ್ಟೆ ಹೇಗಿತ್ತು ಎಂಬುದನ್ನು ಮೊದಲಾಗಿ ತಿಳಿಯಬೇಕಾಗುತ್ತದೆ.
ವಿಜಯನಗರ ಕಾಲದ ಮಾರುಕಟ್ಟೆ ಹೇಗಿತ್ತು ಎಂಬುದನ್ನು ಹಲವು ವಿದೇಶಿ ಪ್ರವಾಸಿಗರು ವರ್ಣಿಸಿದ್ದಾರೆ. ಹೀಗಾಗಿ ದೇಶದ ಇತಿಹಾಸದಲ್ಲಿ ಮಾರುಕಟ್ಟೆ ವಿಚಾರ ಬಂದಾಗ ಹಂಪಿಯ ಬಜಾರ್ ಅನ್ನು ಉಲ್ಲೇಖಿಸದೆ ಇರಲು ಸಾಧ್ಯವೇ ಇಲ್ಲ ಎಂಬ ನೆಲೆಯಲ್ಲಿ ಈ ವಿಷಯವನ್ನು ಈ ಬಾರಿಯ ಪರಿಷ್ಕೃತ ಪಠ್ಯದಲ್ಲಿ ಸೇರಿಸಲಾಗಿದೆ. ಹಂಪಿ ಬಜಾರ್ನಲ್ಲಿ ಧಾನ್ಯಗಳು, ಬೀಜಗಳು, ಹಾಲು, ಎಣ್ಣೆ, ರೇಷ್ಮೆ ಮಾತ್ರವಲ್ಲದೆ ಆಕಳು, ಕುದುರೆಗಳು, ಮೊಲಗಳು, ಗಿಳಿ ಮೊದಲಾದ ಪ್ರಾಣಿ, ಪಕ್ಷಿಗಳ ವ್ಯಾಪಾರವೂ ನಡೆಯುತ್ತಿತ್ತು ಎಂಬುದನ್ನು ಪೋರ್ಚುಗೀಸ್ ಪ್ರವಾಸಿಗ ಡೊಮಿಂಗೊ ಪಯಾಸ್ ಹೇಳಿದ್ದ. ಇನ್ನೊಬ್ಬ ಪೋರ್ಚುಗೀಸ್ ಪ್ರವಾಸಿಗ ಫೆರ್ನಾವೊ ನುನಿಜ್ ಸಹ ಇಲ್ಲಿನ ಮಾರುಕಟ್ಟೆ ವೈವಿಧ್ಯವನ್ನು ಕಂಡು ಬೆರಗಾಗಿದ್ದ, ಇಂತಹ ಮಾರುಕಟ್ಟೆಯನ್ನು ತಾನು ಜಗತ್ತಿನ ಬೇರೆಲ್ಲೂ ಕಂಡಿಲ್ಲ ಎಂದು ಹೇಳಿದ್ದ. ಇಂತಹ ಐತಿಹಾಸಿಕ ದಾಖಲೆಗಳನ್ನು ಉಲ್ಲೇಖಿಸಿ ಪಠ್ಯ ರಚಿಸಲಾಗಿದ್ದು, ಹಂಪಿ ಬಜಾರ್ ಏಕೆ ಮಹತ್ವ ಪಡೆಯುತ್ತದೆ ಎಂಬುದನ್ನು ವಿವರಿಸಲಾಗಿದೆ.
ದೇಶದೆಲ್ಲೆಡೆ ಸಿ.ಬಿ.ಎಸ್.ಇ ಪಠ್ಯ ಕ್ರಮವನ್ನು ಬೋಧಿಸುವ 30822 ಶಾಲೆಗಳಿದ್ದು ಜೂನ್ನಿಂದ ಹೊಸ ಪಠ್ಯ ಕ್ರಮದಂತೆ ಬೋಧನೆ ನಡೆಯಲಿದೆ. ಹಂಪಿ ಬಜಾರ್ ಏಳನೇ ತರಗತಿ ಮಕ್ಕಳ ಪಾಲಿಗೆ ಒಂದು ಅಧ್ಯಯನ ವಿಷಯವಾಗಿ ಅವರ ಮನದಲ್ಲಿ ಶಾಶ್ವತವಾಗಿ ಕುಳಿತುಕೊಳ್ಳಲಿದೆ. ಹಂಪಿಯನ್ನು ವಿಶ್ವ ಪಾರಂಪರಿಕ ತಾಣ ಎಂದು ಯುನೆಸ್ಕೊ 1980ರ ದಶಕದಲ್ಲಿ ಗುರುತಿಸಿದ ಬಳಿಕ ಹಂಪಿಯ ಹಿರಿಮೆ ಜಗದಗಲ ವಿಸ್ತರಿಸಿದೆ. ಹಂಪಿಯ ಸಂಪದ್ಭರಿತ ಮಾರುಕಟ್ಟೆಯ ಮೇಲೆ ಶಾಲಾ ಪಠ್ಯ ಬೆಳಕು ಚೆಲ್ಲುವ ಮೂಲಕ ದೇಶದಾದ್ಯಂತ ವಿದ್ಯಾರ್ಥಿಗಳ ಅಧ್ಯಯನ ವಿಷಯವಾಗಿದೆ.