ಬೆಂಗಳೂರು: 6 ಮಾರ್ಚ್ 2015 ರಂದು ಕನ್ನಡ ಜಾನಪದ ಪರಿಷತ್ ಹುಟ್ಟಿಕೊಂಡಿತು. ಒಂದು ವರ್ಷದ ಅವಧಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಯೋಜನೆ ಮಾಡಿ ಜಾನಪದ ಸಂಸ್ಕೃತಿ, ಕಲೆ, ಪ್ರಕಾರಗಳ ಅಭಿವೃದ್ಧಿಯಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ.

ಪ್ರಸ್ತುತ ಕನ್ನಡ ಜಾನಪದ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾಗಿ ಡಾ.ಎಸ್.ಬಾಲಾಜಿರವರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಜಾನಪದ ಎಂದರೆ ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ವಿರುದ್ದ ಎಂಬ ನಂಬಿಕೆ ಜನರಲ್ಲಿ, ಬಲವಾಗಿ ಬೇರೂರಿದೆ. ಹಾಗೆಯೇ ದಾಖಲೀಕರಣದ ಮೂಲಕ ಮುಂದಿನ ಜನಾಂಗಕ್ಕೆ ಕೂಡಿಡುವುದು ಎಂಬ ಸ್ಥಾಪಿತ ತಿಳುವಳಿಕೆಯ ಚೌಕಟ್ಟಿನ ಆಚೆಗೂ..ಜಾನಪದವನ್ನು ವಿಶಾಲ ಮನೋಭಾವದಲ್ಲಿ ಅರ್ಥೈಸಿಕೊಳ್ಳುವ ಅಗತ್ಯವಿದೆ. ಮೌಖಿಕ ಪರಂಪರೆಯು ಆಯಾಯ ಬುಡಕಟ್ಟು, ಸಮುದಾಯಗಳ,ಮೂಲವನ್ನುತಿಳಿಯಲು ಇರುವ ಆಕಾರ ಎಂಬುದು ನಿಜ. ವಸ್ತು, ವರ್ಣನೆ, ಸಂಗೀತ ಪಾತ್ರ, ಸನ್ನಿವೇಶ,ಸಂಯೋಜನೆಯು ಸಾಹಿತ್ಯಕೃತಿಯಲ್ಲಿರುತ್ತದೆ. ಜಾನಪದ ಕಲೆ ಒಂದು ಜನಾಂಗದ ಕಲೆ ಅಲ್ಲ, ಎಲ್ಲಾ ಕಲೆಗಳ ತಾಯಿಬೇರು ಎಂದು ಕರೆಯಬಹುದು.
ಆಧುನೀಕರಣ, ಜಾಗತೀಕರಣದ,ಇಂದಿನ ಸಂದರ್ಭದಲ್ಲಿ ನಶಿಸುತ್ತಿರುವ ಜಾನಪದ ಸಾಹಿತ್ಯ, ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡ ಜಾನಪದ ಪರಿಷತ್ತನ್ನು ಅಸ್ತಿತ್ವಕ್ಕೆ ತರಲಾಗಿದೆ. ಕನ್ನಡ ನಾಡಿನ ಪ್ರತಿಯೊಂದು ಹಳ್ಳಿಯಲ್ಲಿಯೂ ಇರುವ ಜನಪದ ಕಲೆ, ಸಾಹಿತ್ಯ, ಜನಪದ ಸಾಮಗ್ರಿಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಈಗಾಗಲೇ ಹಲವು ಸಂಗ್ರಹ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಪರಿಷತ್ತಿನ ಮೂಲಕ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ.

ಜನಪದ ಸಲಕರಣೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ,.ಗ್ರಾಮಗಳಲ್ಲಿ ದೊರೆಯುವ ಪ್ರಾಚೀನ ವಸ್ತುಗಳನ್ನು, ಗಾದೆ, ಒಗಟು, ಉಡಪು, ಅಡುಗೆ,ನಂಬಿಕೆ, ಹಬ್ಬ ಹರಿದಿನ, ಜನಪದ ಕಥೆ, ವೇಷಭೂಷಣ, ವೃತ್ತಿ, ಬದುಕು ಕುರಿತು ಈಗಾಗಲೇ ರಾಜ್ಯಾದ್ಯಂತ ದಾಖಲೀಕರಣ ಕಾರ್ಯವನ್ನು ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ನಡೆಸಲಾಗುತ್ತಿದೆ. ಇದರ ಜೊತೆಗೆ ಜನಪದ ವಸ್ತುಗಳ ಮಹತ್ವವನ್ನು ತಿಳಿಸಿಕೊಡಲಾಗುತ್ತಿದೆ.
ಕನ್ನಡ ಜಾನಪದ ಪರಿಷತ್, ಈಗಾಗಲೇ 31 ಜಿಲ್ಲೆಗಳಲ್ಲಿ ಜಿಲ್ಲಾ ಘಟಕಗಳನ್ನು ಅಸ್ತಿತ್ವಕ್ಕೆ ತಂದಿದ್ದು. ಮುಂದುವರಿದ ತಾಲ್ಲೂಕು, ಹೋಬಳಿ ಹಾಗೂ ಗ್ರಾಮ ಘಟಕಗಳಲ್ಲಿ ರಚನಾ ಹಂತದಲ್ಲಿದೆ. ಈಗಾಗಲೇ ಹಲವು ವಿಶ್ವವಿದ್ಯಾನಿಲಯಗಳಲ್ಲೂ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯ, ಹೊರ ರಾಜ್ಯದವರೆಗೂ ಪರಿಷತ್ತಿನ ವತಿಯಿಂದ ಘಟಕಗಳನ್ನು ಸ್ಥಾಪಿಸಲಾಗುವುದು.