
ಬೆಳಗಾವಿ: ರಾಜ್ಯದಲ್ಲಿ ಜೈನ ಸಮಾಜದ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ಮಾಡಬೇಕು. ಮಹಿಳೆಯರಿಗಾಗಿ ಸಮ್ಮೇದ ಶಿಖರ್ಜಿ ತೀರ್ಥಯಾತ್ರೆ ಯೋಜನೆ ಘೋಷಿಸುವುದು ಸೇರಿದಂತೆ ಜೈನ ಸಮಾಜದ ಬೇಡಿಕೆಗಳನ್ನು ವರ್ಷದೊಳಗೆ ಈಡೇರಿಸಬೇಕು. ಇಲ್ಲವಾದರೆ 12 ತಿಂಗಳ ಬಳಿಕ ಸಲ್ಲೇಖನ ವ್ರತ ಕೈಗೊಳ್ಳಲಾಗುವುದು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿದ್ರಾಭಂಗವನ್ನು ಮಾಡುತ್ತೇವೆ ಎಂದು ಶ್ರೀ 108 ಗುಣಧರನಂದಿ ಮುನಿ ಮಹಾರಾಜರು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು.

j3tvkannada
ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಪಟ್ಟಣದ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ಭಟ್ಟಾರಕ ಸಮ್ಮೇಳನ ಹಾಗೂ ಜೈನ ಸಮಾವೇಶದಲ್ಲಿ ಮಾತನಾಡಿದ ಮುನಿಗಳು, ರಾಜ್ಯ ಸರಕಾರವು ಜೈನ ಸಮಾಜವನ್ನು ಹಗುರವಾಗಿ ಪರಿಗಣಿಸಿ, ಸೌಲಭ್ಯ ಒದಗಿಸುವಲ್ಲಿ ಕಡೆಗಣಿಸುತ್ತಿದೆ. ನಮ್ಮ ಹಕ್ಕು ಒದಗಿಸುವಲ್ಲಿ ನಿರ್ಲಕ್ಷ್ಯ ವಹಿಸಿದರೆ, ನಾವು ದೇಶ ಮತ್ತು ದೇಹ ತೊರೆಯಲು ಸಿದ್ಧರಿದ್ದೇವೆ. ನಾನು ಹುಟ್ಟಿರುವುದೇ ಬಡವರಿಗಾಗಿ, ಜೀವಿಸುತ್ತಿರುವುದು ಬಡವರಿಗಾಗಿ. ಅಲ್ಲದೇ ನನ್ನ ಸಾವೂ ಬಡವರಿಗಾಗಿಯೇ ಆಗಲಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಹಸ್ತದ ಚಿಹ್ನೆಯನ್ನು ಎರವಲಾಗಿ ನೀಡಿರುವುದೇ ಜೈನ ಧರ್ಮ. ಆದರೆ, ನಮ್ಮ ಬೇಡಿಕೆಗೆ ಸ್ಪಂದಿಸದೇ ಕಾಂಗ್ರೆಸ್ ಸರಕಾರವು ಇಡೀ ಜೈನ ಸಮಾಜಕ್ಕೆ ಕೈ ಕೊಡುತ್ತಿರುವುದು ಖಂಡನೀಯ. ನಮ್ಮ ನ್ಯಾಯಯುತ ಏಳು ಬೇಡಿಕೆಗಳಲ್ಲಿ ಸರಕಾರವು ಕೇವಲ ನಾಲ್ಕನ್ನು ಮಾತ್ರ ಈಡೇರಿಸಿದ್ದು, ಇನ್ನುಳಿದವುಗಳಿಗೆ ಸ್ಪಂದಿಸುತ್ತಿಲ್ಲ ಎಂದು ಮುನಿಗಳು ಬೇಸರ ವ್ಯಕ್ತ ಪಡಿಸಿದರು. ಅಹಿಂಸಾ ಪಾಲಕರಾದ ಜೈನ ಸಮಾಜ ಕಲ್ಲೆಸೆದು ಹಾಗೂ ಹಿಂಸಾಚಾರಕ್ಕಿಳಿದು ಎಂದೂ ಪ್ರತಿಭಟಿಸುವುದಿಲ್ಲಎಂಬ ಗ್ರಹಿಕೆ ಸರಕಾರಕ್ಕಿದೆ. ನಿದ್ರಾವಸ್ಥೆಯಲ್ಲಿರುವ ಸಿ.ಎಂ ಸಿದ್ದರಾಮಯ್ಯ ಅವರನ್ನು ಎಚ್ಚರಿಸಬೇಕಿದೆ. ಹೀಗಾಗಿ ಇದುವೇ ನಮ್ಮ ಕೊನೆಯ ಸಮ್ಮೇಳನ. ಇನ್ನೇನಿದ್ದರೂ ಆಂದೋಲನವನ್ನೇ ಮಾಡೋಣ ಎಂದು ಗುಣಧರನಂದಿ ಮುನಿ ಮಹಾರಾಜರು ಕರೆ ನೀಡಿದರು.

j3tvkannada
ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆಸರೆಯಾಗಿದ್ದ ವಿದ್ಯಾರ್ಥಿ ವೇತನವನ್ನು ಈ ಹಿಂದಿನಂತೆಯೇ ಮುಂದುವರಿಸಬೇಕು. ರಾಜ್ಯದಲ್ಲಿಇತ್ತೀಚೆಗೆ ನಡೆಸಿರುವ ಜಾತಿಗಣತಿಯಲ್ಲಿ ಜೈನ ಸಮಾಜದವರ ಸಂಖ್ಯೆಯನ್ನು ಕೇವಲ 1.66 ಲಕ್ಷಕ್ಕಷ್ಟೇ ಸೀಮಿತಗೊಳಿಸಲಾಗಿದೆ. ಆದರೆ 20 ಲಕ್ಷಕ್ಕೂ ಅಧಿಕ ಜನಸಂಖ್ಯೆ ರಾಜ್ಯದಲ್ಲಿದೆ ಎಂದು ಸಮಾಜದ ಜನ ಹೇಳುತ್ತಿದ್ದಾರೆ. ಹೀಗಾಗಿ ಈ ಸಮೀಕ್ಷೆಯನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಮತ್ತೊಮ್ಮೆ ಪಾರದರ್ಶಕವಾಗಿ ಸಮೀಕ್ಷೆ ನಡೆಸಿ ತಪ್ಪು ಸರಿಪಡಿಸಬೇಕು ಎಂದು ಮುನಿಗಳು ಒತ್ತಾಯಿಸಿದರು.
ಜೈನ ಸಮಾಜದ ಅಭಿವೃದ್ಧಿಗೆ ಮೀಸಲಿಡುತ್ತಿದ್ದ 50 ಕೋಟಿ ರೂ.ಹಣದಲ್ಲಿಈ ಬಾರಿ 25 ಕೋಟಿ ರೂ.ಕಡಿತಗೊಳಿಸಿದ್ದೀರಿ, ಅದನ್ನು ಹೆಚ್ಚಿಸಿ ಕನಿಷ್ಠ 200 ಕೋಟಿ ರೂ. ನೀಡಬೇಕು ಎಂದು ಸರಕಾರವನ್ನು ಆಗ್ರಹಿಸಿದ ಅವರು ನಮಗೆ ನಮ್ಮ ಮತದಾನದ ಫಲಕೊಡಿ ಎಂದು ಕೇಳುತ್ತಿದ್ದು, ಸಮಾಜದ ಜನ ಒಗ್ಗಟ್ಟಿನಿಂದ ಇದ್ದರೆ ಎಲ್ಲವೂ ಸಾಧ್ಯವಾಗುತ್ತದೆ ಎಂದು ಮುನಿಗಳು ಹೇಳಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಜಾಗತಿಕವಾಗಿ ಸಮಾಜದಲ್ಲಿಅಶಾಂತಿ ಉಂಟಾಗುತ್ತಿದ್ದು ಕ್ರೋಧ ಹೆಚ್ಚಾಗಿದೆ.
ಈ ಅಶಾಂತಿ ವಾತಾವರಣ ಕೊನೆಗಾಣಿಸಲು ಅಹಿಂಸಾ ಪರಮೋಧರ್ಮ ಎಂಬ ಜೈನ ತೀರ್ಥಂಕರರ ಸಂದೇಶವೇ ಮದ್ದು. ಸಮುದಾಯದ ಬೇಡಿಕೆಯ ಬಗ್ಗೆ ಸರ್ಕಾರಕ್ಕೆ ತಿಳಿಸುತ್ತೇವೆ ಎಂದು ಅಭಿಪ್ರಾಯಪಟ್ಟರು. ಭಗವಾನ್ ಮಹಾವೀರ ಹಾಗೂ ಶಾಂತಿಸಾಗರ ತೀರ್ಥಂಕರರ ಧರ್ಮ ಸಂದೇಶಗಳನ್ನು ಪಾಲಿಸುವುದು ಹಾಗೂ ಜೈನ ಧರ್ಮದ ಅಹಿಂಸಾ ತತ್ವ ಹಾಗೂ ಪ್ರಾಚೀನ ಸಂಸ್ಕೃತಿಯನ್ನು ಮುಂದುವರಿಸಬೇಕು ಎಂಬ ನಿರ್ಣಯಗಳನ್ನು ಭಟ್ಟಾರಕ ಸಮ್ಮೇಳನ ಅಂಗೀಕರಿಸಿತು. ಶಾಸಕರಾದ ಲಕ್ಷ್ಮಣ ಸವದಿ, ಗಣೇಶ ಹುಕ್ಕೇರಿ, ಭರಮಗೌಡ ಕಾಗೆ, ಅಭಯ ಪಾಟೀಲ, ಮಹಾರಾಷ್ಟ್ರದ ಶಿರೋಳ ಶಾಸಕ ರಾಜೇಂದ್ರ ಯಡ್ರಾಂವಕರ್, ಮಾಜಿ ಸಚಿವರಾದ ಶ್ರೀಮಂತ ಪಾಟೀಲ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.