
ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ಗೇಟ್ 2024 ಆ.11ರಂದು ರಾತ್ರಿ ಕೊಚ್ಚಿಹೋದ ಘಟನೆಯಂತೆ, ಪ್ರಸಕ್ತ ವರ್ಷ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಕಳೆದ ವರ್ಷ ಸ್ಟಾಪ್ಲಾಗ್ ಗೇಟ್ ಅಳವಡಿಸುವ ಮೂಲಕ ವ್ಯರ್ಥವಾಗಿ ಹರಿಯುತ್ತಿದ್ದ ನೀರು ತಡೆಹಿಡಿದು ಎರಡೂ ಬೆಳೆಗೂ ನೀರು ಹರಿಸುವಲ್ಲಿ ತಜ್ಞರು ಯಶಸ್ವಿಯಾಗಿದ್ದರು. ಈ ಸ್ಟಾಪ್ಲಾಗ್ ಗೇಟ್ ಬದಲಿಸಿ ಶಾಶ್ವತ ಗೇಟ್ ಅಳವಡಿಸುವ ಕಾರ್ಯ ಟೆಂಡರ್ ಹಂತ ಪೂರ್ಣವಾದರೂ ವಿಳಂಬವಾಗುತ್ತಿದೆ. ಮತ್ತೊಂದೆಡೆ ಜಲಾಶಯಕ್ಕೆ ದಿನದಿಂದ ದಿನಕ್ಕೆ ಒಳಹರಿವು ಗಣನೀಯವಾಗಿ ಏರಿಕೆಯಾಗುತ್ತಿದೆ. ಎಲ್ಲ 33 ಕ್ರಸ್ಟ್ಗೇಟ್ ದೃಢತೆ ಪರಿಶೀಲಿಸಿದ ತಜ್ಞರು, ಪ್ರಸಕ್ತ ವರ್ಷ ಜಲಾಶಯದಲ್ಲಿ 80 ಟಿ.ಎಂ.ಸಿ ನೀರು ಸಂಗ್ರಹಿಸುವಂತೆ ಸಲಹೆ ನೀಡಿದ್ದಾರೆ.

j3tvkannada
ಈ ಹಿನ್ನೆಲೆ ತುಂಗಭದ್ರಾ ಜಲಾಶಯ ಈ ಬಾರಿ ಪೂರ್ಣ ತುಂಬುವುದು ಹಾಗೂ ಎರಡು ಬೆಳೆಗಳಿಗೆ ಸಮರ್ಪಕ ನೀರು ಒದಗಿಸುವುದು ಅನುಮಾನವಾಗಿದೆ. ತುಂಗಭದ್ರಾ ಜಲಾಶಯದ ಎಲ್ಲ ಕ್ರಸ್ಟ್ಗೇಟ್ಗಳ ಸ್ಥಿತಿಗತಿ ಪರಿಶೀಲಿಸಿ ವರದಿ ಸಲ್ಲಿಸಲು ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ)ದ ನಿವೃತ್ತ ಅಧ್ಯಕ್ಷ ಎ.ಕೆ.ಬಜಾಜ್ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ತಂಡ 2025ರ ಏ.9 ರಂದು ಜಲಾಶಯವನ್ನು ಸಂಪೂರ್ಣ ಪರಿಶೀಲಿಸಿದೆ. ಜಲಾಶಯದ ಸುರಕ್ಷತೆ ಹಾಗೂ ನಿರ್ವಹಣೆಯ ಬಗ್ಗೆ ಕೈಗೊಳ್ಳಬೇಕಾದ ಅಂಶಗಳ ಬಗ್ಗೆ ವಿಸ್ತೃತ ವರದಿ ನೀಡಿದೆ. ಮತ್ತೊಂದು ತಜ್ಞರ ಸಮಿತಿ ಜಲಾಶಯದ 19ನೇ ಕ್ರಸ್ಟ್ಗೇಟ್ ದುರಂತದ ಬಳಿಕ ಎಲ್ಲ ಕ್ರಸ್ಟ್ಗೇಟ್ಗಳ ಸದೃಢತೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ಸಮಗ್ರ ಅಧ್ಯಯನಕ್ಕೆ ಸಲಹೆ ನೀಡಿದ್ದರು.

j3tvkannada
ತಪಾಸಣೆ ಬಳಿಕ ಎಲ್ಲ ಗೇಟ್ಗಳ ಬದಲಾವಣೆಗೆ ಶಿಫಾರಸು ಮಾಡಲಾಗಿತ್ತು. ಕ್ರಸ್ಟ್ಗೇಟ್ಗಳು ಶೇ.30 ರಿಂದ 50 ರಷ್ಟು ಬಲಹೀನಗೊಂಡಿರುವುದು ಅಧ್ಯಯನದಲ್ಲಿ ಬಹಿರಂಗಗೊಂಡಿತ್ತು. ಮತ್ತೊಂದೆಡೆ ಕ್ರಸ್ಟ್ಗೇಟ್ ವಿನ್ಯಾಸ ತಜ್ಞ ಎನ್.ಕನ್ನಯ್ಯ ನಾಯ್ಡು ಅವರೂ ಎಲ್ಲ ಕ್ರಸ್ಟ್ಗೇಟ್ಗಳನ್ನು ಹಂತ ಹಂತವಾಗಿ ಬದಲಿಸುವಂತೆ ಸಲಹೆ ನೀಡಿದ್ದರು. ಹೆಚ್ಚು ಅಪಾಯದಲ್ಲಿರುವ 19ನೇ ಕ್ರಸ್ಟ್ಗೇಟ್ ಬದಲಿಸುವ ಕಾಮಗಾರಿ ಇದುವರೆಗೂ ಆರಂಭವಾಗದೇ ಇರುವುದು ನೀರಿನ ಸಂಗ್ರಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ.
ಜಲಾಶಯದ ಹೂಳಿನ ಮಟ್ಟದ ಮೇಲೆ 12 ರಿಂದ 15 ಅಡಿಯವರೆಗೆ ಮಾತ್ರ ನೀರು ಸಂಗ್ರಹಿಸಲು ಅವಕಾಶವಿದೆ. ಪೂರ್ಣ ಸಂಗ್ರಹ ಮಟ್ಟ 1633.00 ಅಡಿ ಬದಲು ಈ ಬಾರಿ 1626.06 ಅಡಿಯವರೆಗೆ ಅಂದರೆ 80 ಟಿ.ಎಂ.ಸಿ (ಪೂರ್ಣ ಮಟ್ಟ 105.00 ಟಿ.ಎಂ.ಸಿ) ನೀರು ಸಂಗ್ರಹಿಸಬಹುದಾಗಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ. ಈ ಹಿನ್ನೆಲೆ ತುಂಗಭದ್ರಾ ತುಂಬುವುದು ಅನುಮಾನವಾಗಿದ್ದು ಕೊಪ್ಪಳ, ಬಳ್ಳಾರಿ, ವಿಜಯನಗರ ಹಾಗೂ ರಾಯಚೂರು ಜಿಲ್ಲೆ ಸೇರಿ ನೆರೆಯ ಆಂಧ್ರ ಮತ್ತು ತೆಲಂಗಾಣ ರಾಜ್ಯದ ಕೆಲವು ಜಿಲ್ಲೆಗಳ ಲಕ್ಷಾಂತರ ರೈತರ ಎರಡು ಬೆಳೆಗಳ ಕನಸು ಕಮರುವಂತಾಗಿದೆ.