
ಹಾಸನ: ಮುಂದಿನ ಮೂರು ತಿಂಗಳಿನಲ್ಲಿ ಶಿರಾಡಿಘಾಟ್ ರಸ್ತೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಎಚ್.ಎಚ್.ಎ.ಐ ಅಧಿಕಾರಿಗಳು, ಗುತ್ತಿಗೆದಾರರು ತಿಳಿಸಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಸಕಲೇಶಪುರ ತಾಲೂಕು ದೊಡ್ಡತಪ್ಪಲು ಗ್ರಾಮದ ಬಳಿ ಭೂ ಕುಸಿತ ಪ್ರದೇಶವನ್ನು ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮೂರಲ್ಲ ಇನ್ನೂ ಆರು ತಿಂಗಳೇ ಆಗಲಿ ಕಾಮಗಾರಿ ಪೂರ್ಣಗೊಳಿಸಿದರೆ ಒಳ್ಳೆಯದು ಎಂದರು. ಲೋಕೋಪಯೋಗಿ ಸಚಿವನಾಗಿ ನನ್ನ ಅಧಿಕಾರ ಅವಧಿಯಲ್ಲಿ ಶಿರಾಡಿ ಸಮಸ್ಯೆಗೆ ಮುಕ್ತಿ ಹಾಡುತ್ತೇನೆ ಎಂದು ಹೇಳಿದ್ದೆ.

j3tvkannada
ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಬೇಗ ಕಾಮಗಾರಿ ಮುಗಿಯಬೇಕಿದೆ ಎಂದು ತಿಳಿಸಿದರು. ಸದ್ಯ ಕಾಮಗಾರಿ ನಡೆಯುತ್ತಿದೆ. ಇದು ನಮ್ಮ ನಿಯಂತ್ರಣದಲ್ಲಿಲ್ಲ. ಕೇಂದ್ರ ಸರಕಾರದ ನಿಯಂತ್ರಣದಲ್ಲಿದೆ. ನಾವು ಮನವಿ ಮಾಡಬೇಕೇ ಹೊರತು ನೇರವಾಗಿ ಏನೂ ಮಾಡಲು ಆಗಲ್ಲ ಎಂದು ಹೇಳಿದರು. ಕಳಪೆ ಕಾಮಗಾರಿ ಆಗಿದೆ ಎಂದು ಕೇಂದ್ರಕ್ಕೆ ನಾವು ಪತ್ರ ಬರೆಯಬಹುದು ಅಷ್ಟೇ. ಆ ಕೆಲಸ ಮಾಡುತ್ತೇನೆ ಎಂದರು. ಕಾಮಗಾರಿ ಮುಗಿಯುವುದು ತಡ ಆಗಿದೆ. ಸರಕಾರಗಳು ಬದಲಾಗಿದ್ದು ಅದಕ್ಕೆ ಕಾರಣ.
ಲೋಕೋಪಯೋಗಿ ಸಚಿವರು ಬದಲಾದರು. ಆದರೆ ಕಾಮಗಾರಿ ಪೂರ್ಣಗೊಂಡಿಲ್ಲ. ನಮ್ಮ ಅವಧಿಯಲ್ಲಿ ಶಿರಾಡಿ ಘಾಟ್ ರಸ್ತೆ ಕಾಮಗಾರಿ ಮುಗಿಸಬೇಕು ಎನ್ನುವ ಆಸೆ ಇದೆ. ಜನರಿಗೆ ತೊಂದರೆ ಆಗದ ರೀತಿ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಶಿರಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಮ್ಮ ಕೈಯಲ್ಲಿ ಇದ್ದಿದ್ದರೆ ವೇಗವಾಗಿ ಕಾಮಗಾರಿ ಮಾಡಿಸುತ್ತಿದ್ದೆವು. ಆದರೆ ಕೇಂದ್ರದ ಕೈಯಲ್ಲಿ ಇದೆ. ಬೇಗ ಮುಕ್ತಿ ನೀಡಲು ಪ್ರಯತ್ನ ಪಡುತ್ತೇವೆ ಎಂದರು.