
ಬೆಂಗಳೂರು: ಕನಕಪುರ ಮುಖ್ಯರಸ್ತೆಯಲ್ಲಿ (ರಾಷ್ಟ್ರೀಯ ಹೆದ್ದಾರಿ-209) ಸರ್ವೀಸ್ ರಸ್ತೆ ನಿರ್ಮಿಸದೆ ಸೋಮನಹಳ್ಳಿ ಗೇಟ್ ಬಳಿ ಟೋಲ್ ಸಂಗ್ರಹಿಸಲು ಅವಕಾಶ ಮಾಡಿಕೊಟ್ಟಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕ್ರಮವನ್ನು ಖಂಡಿಸಿ ಸುತ್ತಮುತ್ತಲ ಗ್ರಾಮಗಳ ರೈತರು ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.

j3tvkannada
ರಾಷ್ಟ್ರೀಯ ಹೆದ್ದಾರಿ-209ರಲ್ಲಿ ಸರ್ವೀಸ್ ರಸ್ತೆ ನಿರ್ಮಿಸದೆ ಸೋಮನಹಳ್ಳಿ ಗೇಟ್ ಬಳಿ ಟೋಲ್ ಸಂಗ್ರಹಿಸಲಾಗುತ್ತಿದೆ. ಇದರಿಂದಾಗಿ ಟೋಲ್ನಿಂದ ಕೇವಲ 500 ಮೀಟರ್ ಅಂತರದಲ್ಲಿರುವ ಗ್ರಾಮಸ್ಥರು 80 ರೂ. ಟೋಲ್ ಶುಲ್ಕ ಪಾವತಿಸಬೇಕಾಗಿದೆ. ಇದನ್ನು ವಿರೋಧಿಸಿ ಬೆಳಗ್ಗೆಯೇ ಸುತ್ತಮುತ್ತಲ ಗ್ರಾಮಸ್ಥರು, ವಾಹನಗಳು ಹಾಗೂ ಜಾನುವಾರುಗಳೊಂದಿಗೆ ರಸ್ತೆಗಿಳಿದು ಪ್ರತಿಭಟನೆ ಶುರು ಮಾಡಿದರು. ಕೆಲ ರೈತರು ಮೈಮೇಲೆ ಎಂಜಿನ್ ಆಯಿಲ್ ಸುರಿದುಕೊಂಡು ಆಕ್ರೋಶ ಹೊರ ಹಾಕಿದರು.
ಕರ್ನಾಟಕ ರಾಜ್ಯ ರೈತ ಹಿತರಕ್ಷಣ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಕನಕಪುರ ರಸ್ತೆಯ ಉದಿಪಾಳ್ಯ, ಸಾಲುಹುಣಸೆ, ಕಗ್ಗಲೀಪುರ, ಪಟ್ಟರೆಡ್ಡಿಪಾಳ್ಯ, ಗಾಂಧಿನಗರ, ಸೋಮನಹಳ್ಳಿ ಗೇಟ್ನಲ್ಲಿನ ಕೆಲ ಅಂಗಡಿ-ಮುಂಗಟ್ಟುಗಳ ಮಾಲೀಕರು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡಿ ಸಾಥ್ ನೀಡಿದರು. ಅದೇ ರೀತಿ ಲೋಕಾಯುಕ್ತ ನಿವೃತ್ತ ನ್ಯಾ.ಎನ್. ಸಂತೋಷ್ ಹೆಗ್ಡೆ, ಶಾಸಕ ಎಸ್.ಟಿ. ಸೋಮಶೇಖರ್ ಹಾಗೂ ರೈತ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವಾಹನಗಳಿಂದ ಶುಲ್ಕ ಸಂಗ್ರಹಿಸುವುದನ್ನು ಖಂಡಿಸಿ ಟೋಲ್ಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಪ್ರತಿಭಟನ ರೈತರನ್ನು ಪೊಲೀಸರು ಬಂಧಿಸಿ, ಕೆಲ ಹೊತ್ತಿನ ಬಳಿಕ ಬಿಡುಗಡೆ ಮಾಡಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ಕನಕಪುರ ಮುಖ್ಯ ರಸ್ತೆಯಲ್ಲಿ ಸರ್ವೀಸ್ ರಸ್ತೆ ನಿರ್ಮಿಸದೆ ಟೋಲ್ ಸಂಗ್ರಹಿಸುತ್ತಿರುವುದು ಖಂಡನೀಯ. ಟೋಲ್ ಇರುವೆಡೆ ಸರ್ವೀಸ್ ರಸ್ತೆ ನಿರ್ಮಿಸದಿರುವುದು ಕಾನೂನಿಗೆ ವಿರುದ್ಧವಾಗಿದೆ, ಎಂದು ಹೇಳಿದರು.
ಟೋಲ್ನಿಂದಾಗಿ ಸುತ್ತಮುತ್ತಲ ನಾಲ್ಕೈದು ಗ್ರಾಮಗಳ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸರ್ವೀಸ್ ರಸ್ತೆ ನಿರ್ಮಿಸಿ ಕೊಡಬೇಕು. ಟೋಲ್ ಸಿಬ್ಬಂದಿಯು ರೌಡಿಸಂ ಮಾಡುತ್ತಿರುವ ಆರೋಪವಿದೆ. ಈ ರೌಡಿಸಂ ನನ್ನ ಕ್ಷೇತ್ರದಲ್ಲಿ ನಡೆಯಲ್ಲ. ಅವರಿಗೆ ತಾಕತ್ ಇದ್ದರೆ, ಶಾಸಕನಾದ ನನ್ನ ಮೇಲೆ ರೌಡಿಸಂ ಮಾಡಲಿ. ರೈತರ ಮೇಲೆ ಹಲ್ಲೆ ಮಾಡುವುದನ್ನು ಸಹಿಸುವುದಿಲ್ಲ, ಎಂದು ಎಸ್. ಟಿ. ಸೋಮಶೇಖರ್ ಎಚ್ಚರಿಕೆ ನೀಡಿದರು.
ಸ್ಥಳೀಯ ಗ್ರಾಮಸ್ಥರಿಗೆ ಟೋಲ್ ಶುಲ್ಕದಿಂದ ವಿನಾಯಿತಿ ನೀಡುವ ಸಂಬಂಧ ಜಿಲ್ಲಾಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿ ಚರ್ಚಿಸಲಾಗುವುದು. ಸಮರ್ಪಕ ರಸ್ತೆ ನಿರ್ಮಿಸದೆ ಟೋಲ್ ಸಂಗ್ರಹಿಸುತ್ತಿರುವುದು ಸರಿಯಲ್ಲ. ಈ ಎಲ್ಲ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚಿಸಿ, ಗ್ರಾಮಸ್ಥರ ಬೇಡಿಕೆ ಈಡೇರಿಸಲಾಗುವುದು, ಎಂದು ಭರವಸೆ ನೀಡಿದರು.