
ಮೈಸೂರು: ಭಾರತೀಯ ಸೈನಿಕರ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಯಶಸ್ಸಿಗೆ ಬೆಂಬಲವಾಗಿ ಮತ್ತು ದೇಶದ ರಕ್ಷಕರಿಗೆ ಗೌರವ ಸೂಚಿಸುವ ಸಲುವಾಗಿ ಮೈಸೂರಿನ ಬೀಡಿ ಕಾರ್ಮಿಕರ ಕಾಲೋನಿ ಆಸ್ಪತ್ರೆಯಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು. ಈ ಶಿಬಿರದಲ್ಲಿ ದೇಶಪ್ರೇಮಿಗಳು, ರಾಜಕೀಯ ಮುಖಂಡರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ನೂರಾರು ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಭಾಗವಹಿಸಿ ರಕ್ತದಾನ ಮಾಡಿದರು.

j3tvkannada
ಆಪರೇಷನ್ ಸಿಂಧೂರ್ ಯಶಸ್ಸಿಗೆ ಬೆಂಬಲ:-
ಮೈಸೂರು ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೆ.ಆರ್. ಆಸ್ಪತ್ರೆ ರಕ್ತನಿಧಿ ಕೇಂದ್ರ, ಜೀವದಾರ ರಕ್ತನಿಧಿ ಕೇಂದ್ರ ಹಾಗೂ ಮಾಜಿ ಸೈನಿಕರ ಸಂಘದ ಸಹಯೋಗದೊಂದಿಗೆ ಈ ಶಿಬಿರ ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆಯವರೆಗೆ ನಡೆಯಿತು. ಈ ಅವಧಿಯಲ್ಲಿ ಒಟ್ಟು 501 ಯೂನಿಟ್ ರಕ್ತ ಸಂಗ್ರಹವಾಗಿದ್ದು, ಇದನ್ನು ಸುರಕ್ಷಿತವಾಗಿ ಶೇಖರಿಸಲಾಗಿದೆ. ಸಂಗ್ರಹವಾದ ರಕ್ತವನ್ನು ರಕ್ತದ ಅವಶ್ಯಕತೆ ಇರುವವರಿಗೆ, ವಿಶೇಷವಾಗಿ ಸೈನಿಕರಿಗೆ ಅಗತ್ಯವಿದ್ದಾಗ ಒದಗಿಸಲಾಗುವುದು.
ಈ ಶಿಬಿರವು ದೇಶಭಕ್ತಿಯ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿತು. ಸೈನಿಕರಿಗೆ ಗೌರವ ಸೂಚಿಸುವ ಈ ಕಾರ್ಯಕ್ರಮ ದೇಶಪ್ರೇಮದ ಸಂದೇಶವನ್ನು ಸಾರುತ್ತದೆ, ಎಂದು ಶಿಬಿರದ ಆಯೋಜಕರೊಬ್ಬರು ತಿಳಿಸಿದರು.