
ದಾವಣಗೆರೆ: ನಗರದ ಕಾಳಿಕಾದೇವಿ ರಸ್ತೆಯಲ್ಲಿರುವ ಶ್ರೀ ಕಾಳಿಕಾಂಬ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ವಿಶ್ವಕರ್ಮ ಸಮಾಜ ಸಂಘವು ಆಯೋಜಿಸಿದ್ದ 42 ನೇ ವರ್ಷದ ಸಾಮೂಹಿಕ ಉಪನಯನ ಮತ್ತು ವಿವಾಹ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

j3tvkannada
ಮನೆಯಲ್ಲಿ ಕಸ ತುಂಬಿದಾಗ ಗುಡಿಸಿ ಸ್ವಚ್ಛಗೊಳಿಸುತ್ತೇವೆ, ಬಟ್ಟೆ ಕೊಳೆಯಾದರೆ ತೊಳೆದು ಶುದ್ಧ ಮಾಡುತ್ತೇವೆ. ಅದೇ ರೀತಿ ನಮ್ಮ ಮನಸ್ಸು ಕಲ್ಮಶಗಳಿಂದ ತುಂಬಿದ್ದರೆ, ಇಂತಹ ಧಾರ್ಮಿಕ ಕಾರ್ಯಕ್ರಮಗಳಿಗೆ ಆಗಮಿಸಬೇಕು. ಇದರಿಂದ ಮನಸ್ಸು ಶುದ್ಧವಾಗುವುದಲ್ಲದೆ, ಶಾಂತಿಯನ್ನು ಅನುಭವಿಸುತ್ತದೆ ಮತ್ತು ಜ್ಞಾನವನ್ನು ಪಡೆಯುತ್ತದೆ ಎಂದು ಅಫಜಲಪುರ ಮಠದ ವಿಶ್ವಕರ್ಮ ಜಗದ್ಗುರು ಶ್ರೀ ಪ್ರಣವ ನಿರಂಜನ ಮಹಾಸ್ವಾಮೀಜಿ ಹೇಳಿದರು.
ಜಗತ್ತಿನಲ್ಲಿ ನಮ್ಮ ದೇಹ ಶಾಶ್ವತವಲ್ಲ, ಹಣ ಮತ್ತು ಯೌವ್ವನವೂ ಶಾಶ್ವತವಲ್ಲ. ಆದರೆ ನಾವು ಮಾಡುವಂತಹ ಪುಣ್ಯ ಕಾರ್ಯಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ ಎಂದು ಶಾಸ್ತ್ರಗಳು ಸಾರಿ ಹೇಳುತ್ತವೆ. ಆದ್ದರಿಂದ ಮಾನವರಾದ ನಾವೆಲ್ಲರೂ ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ದಾಸರ ವಾಣಿಯನ್ನು ಉಲ್ಲೇಖಿಸಿದ ಶ್ರೀಗಳು, ಮಾನವ ಧರ್ಮವು ಅತ್ಯಂತ ಶ್ರೇಷ್ಠವಾದದ್ದು, ಅದನ್ನು ಎಂದಿಗೂ ಹಾಳು ಮಾಡಿಕೊಳ್ಳಬಾರದು. ಧರ್ಮ ಕಾರ್ಯಗಳ ಮೂಲಕವೇ ಈ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ವಿಶ್ವಕರ್ಮ ಸಮಾಜದ ಸಂಘವು, ಜನರ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳನ್ನು ಮನಗಂಡು, ಉಚಿತ ಸಾಮೂಹಿಕ ವಿವಾಹ ಮತ್ತು ಉಪನಯನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇದೊಂದು ಅತ್ಯುತ್ತಮವಾದ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಇಂತಹ ಕಾರ್ಯಕ್ರಮಗಳು ಇನ್ನಷ್ಟು ಹೆಚ್ಚಾಗಲಿ ಎಂದು ಶ್ರೀಗಳು ಹಾರೈಸಿದರು. ಜವಳಿ ಉದ್ಯಮಿ ಬಿ.ಸಿ. ಉಮಾಪತಿ ಮಾತನಾಡುತ್ತಾ, ಜಿಲ್ಲೆಯಲ್ಲಿ ವಿಶ್ವಕರ್ಮ ಸಮಾಜವು ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಈ ಹಿಂದೆ ಇದೇ ಸ್ಥಳಧಲ್ಲಿ ಚಿಕ್ಕದಾಗಿದ್ದ ದೇವಾಲಯವನ್ನು ಇಂದು ಸುಂದರವಾಗಿ ಅಭಿವೃದ್ಧಿಪಡಿಸಿರುವುದು ಸಮಾಜದ ಒಗ್ಗಟ್ಟಿಗೆ ಸಾಕ್ಷಿಯಾಗಿದೆ. ಸಮಾಜವು ನಮ್ಮೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದೆ ಮತ್ತು ಮುಂದೆಯೂ ಸಮಾಜದ ಅಭಿವೃದ್ಧಿಗೆ ತಮ್ಮ ಸಹಕಾರ ಸದಾ ಇರುತ್ತದೆ ಎಂದು ಭರವಸೆ ನೀಡಿದರು.
ಹರಿಹರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಎನ್.ಎಂ. ಮುರುಗೇಶ್ ಮಾತನಾಡಿ, ವಿಶ್ವಕರ್ಮ ಸಮಾಜದ ಶ್ರೇಷ್ಠ ಕಾರ್ಯಗಳನ್ನು ಪುರಾಣಗಳ ಕಾಲದಿಂದಲೂ ಉಲ್ಲೇಖಿಸಲಾಗಿದೆ. ತ್ರೇತಾಯುಗ ಮತ್ತು ದ್ವಾಪರ ಯುಗಗಳಲ್ಲಿ ಮಾತ್ರವಲ್ಲದೆ, ಕಲಿಯುಗದಲ್ಲೂ ವಿಶ್ವಕರ್ಮದವರ ಕೆಲಸಗಳ ಮಹತ್ವವನ್ನು ತಿಳಿಸಲಾಗಿದೆ. ಅವರನ್ನು ದೈವಿಕ ವಾಸ್ತುಶಿಲ್ಪಿಗಳು ಎಂದೇ ಕರೆಯಲಾಗುತ್ತದೆ. ಇಂತಹ ಶ್ರೇಷ್ಠ ಸಮಾಜದಲ್ಲಿ ಜನಿಸಿರುವ ನೀವೆಲ್ಲರೂ ನಿಜಕ್ಕೂ ಭಾಗ್ಯಶಾಲಿಗಳು ಎಂದು ಹೇಳಿದರು.
ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವಕರ್ಮ ಸಮಾಜ ಸಂಘದ ಅಧ್ಯಕ್ಷ ಆರ್.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬಸಾಪುರದ ಬಿ.ನಾಗೇಂದ್ರಚಾರ್, ಎನ್.ಪೂರ್ವಚಾರ್, ಬಿ.ಪಿ. ಜಗನ್ನಾಥ್, ಬಿ.ಪಿ. ರಮೇಶಚಾರ್ ಇತರರು ಉಪಸ್ಥಿತರಿದ್ದರು. ಸಿ.ಪಿ. ಪೂರ್ವಚಾರ್ ನಿರೂಪಿಸಿದರು. ಕೊಟ್ರೇಶಚಾರ್ ಸ್ವಾಗತಿಸಿದರು. ಬಿ.ವಿ ರಾಜಶೇಖರ್ ವಂದಿಸಿದರು.