
ಚಿಕ್ಕಮಗಳೂರು: ಚಿಕ್ಕಮಗಳೂರಿನ ಜಗತ್ಪ್ರಸಿದ್ಧ ಪುಣ್ಯಸ್ಥಳವಾದ ಹೊರನಾಡಿಗೆ ಹೋಗಲು ಕಳಸ ಮಾರ್ಗವಾಗಿ ಹೋಗಬೇಕು. ಮಾರ್ಗ ಮಧ್ಯೆ ಭದ್ರಾ ನದಿ ಹರಿಯುತ್ತದೆ. 1996ರಲ್ಲಿ ಆ ನದಿಗೆ ಸೇತುವೆಯನ್ನು ಕಟ್ಟಲಾಗಿತ್ತು. ಆದರೆ, ಪ್ರತಿ ವರ್ಷದ ಮಳೆಗಾಲದಲ್ಲಿ ಆ ಸೇತುವೆ ಮುಳುಗಡೆಯಾಗಿ ಭಕ್ತಾದಿಗಳಿಗೆ ತೊಂದರೆಯಾಗುತ್ತಿತ್ತು. ಇತ್ತೀಚೆಗೆ, ಆ ನದಿಗೆ ಅಡ್ಡಲಾಗಿ ಮತ್ತೊಂದು ಸೇತುವೆಯನ್ನು ಕಟ್ಟಲಾಗಿದ್ದು ಅದನ್ನು ಮೇ 9ರಂದು ಲೋಕಾರ್ಪಣೆ ಮಾಡಲಾಗಿದೆ. ಸೇತುವೆ ನಿರ್ಮಾಣದಿಂದ ಸಮಸ್ಯೆ ತಾತ್ಕಾಲಿಕವಾಗಿ ದೂರವಾಗಿದ್ದರೂ ಮಳೆಗಾಲದಲ್ಲಿ ಜಡಿ ಮಳೆಗೆ ನದಿಯಲ್ಲಿ ಹೆಚ್ಚಿನ ನೀರು ಹರಿದು ಸೇತುವೆ ಮುಳುಗಡೆಯಾಗಿ ಕಳಸ-ಹೊರನಾಡು ಸಂಪರ್ಕ ಕಡಿದು ಹೋಗುತ್ತಿತ್ತು.

j3tvkannada.in
ಸರ್ವಋುತು ಪ್ರಯೋಜನವಾಗುವಂತಹ ಸೇತುವೆ ನಿರ್ಮಾಣ ಮಾಡಬೇಕು ಎನ್ನುವ ಕೂಗು ಹಲವಾರು ದಶಕಗಳಿಂದ ಕೇಳಿ ಬರುತ್ತಿತ್ತು.ಇದನ್ನು ಮನಗಂಡ ರಾಜ್ಯ ಸರಕಾರ 15.50 ಕೋಟಿ ರೂ. ವೆಚ್ಚದಲ್ಲಿಅತ್ಯಂತ ಸುಲಲಿತವಾಗಿ ಸಾಗಬಹುದಾದ ಬೃಹತ್ ಸೇತುವೆ ನಿರ್ಮಾಣ ಮಾಡಿದ್ದು, ಬುಧವಾರದಿಂದ ಸಂಚಾರಕ್ಕೆ ಮುಕ್ತವಾಗಿದೆ. ಕಳೆದ 30 ವರ್ಷಗಳ ಅವಧಿಯಲ್ಲಿ ಲೆಕ್ಕಕ್ಕೆ ಸಿಗದಷ್ಟು ವಾಹನಗಳನ್ನು ದಾಟಿಸಿ ತನ್ನ ಆಯುಷ್ಯವನ್ನು ಪೂರ್ಣಗೊಳಿಸಿದ ಹೆಬ್ಬಾಳೆ ಮುಳುಗು ಸೇತುವೆ ಇದೀಗ ನೇಪಥ್ಯಕ್ಕೆ ಸೇರಿದೆ.
ಮಳೆಗಾಲದಲ್ಲಿ ಭದ್ರಾ ನದಿ ತುಂಬಿ ಹರಿಯುವ ಸಂದರ್ಭ ಹಳೆಯ ಸೇತುವೆಯನ್ನು ನೋಡುವುದೇ ಕಣ್ಣಿಗೆ ಹಬ್ಬವಾಗುತ್ತಿತ್ತು. ಇನ್ನೇನು ಸೇತುವೆ ಮುಳುಗಡೆ ಆಯ್ತು ಎಂದು ಗೊತ್ತಾದ ಕೂಡಲೇ ಈ ಭಾಗದಲ್ಲೆಲ್ಲ ಸುದ್ದಿಯಾಗಿ ಸೇತುವೆ ನೋಡಲು ಜನ ತಂಡೋಪ ತಂಡವಾಗಿ ಬರುತ್ತಿದ್ದರು. ಮಾಧ್ಯಮದವರು ತಮ್ಮ ಸುದ್ದಿಗಾಗಿ ನದಿ ದಂಡೆಯಲ್ಲಿ ಹೆಬ್ಬಾಳೆ ಮುಳುಗುವುದನ್ನೆ ಕಾಯುತ್ತಿದ್ದರು. ಮುಳುಗು ಸೇತುವೆ ಚಿತ್ರಗಳು ಪತ್ರಿಕೆ, ಟಿವಿ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿದ್ದವು.
ಆದರೆ ಇನ್ನು ಅದೆಲ್ಲ ನೆನಪು ಮಾತ್ರ. ಸರ್ವ ಋುತುಗಳಲ್ಲಿ ಪ್ರಯಾಣಿಸಬಹುದಾದಂತಹ ಸೇತುವೆ ನಿರ್ಮಾಣವಾಗಿ ಸಾರ್ವಜನಿಕರಿಗೆ ಮುಕ್ತವಾಗಿದೆ. ಸಂಚಾರದ ಮೊದಲ ದಿನವೇ ನೂರಾರು ವಾಹನಗಳು ಹೊಸ ಸೇತುವೆ ಮೂಲಕ ಸಾಗಿದವು. ನಿತ್ಯದ ಪ್ರಯಾಣಿಕರು ಮಾತ್ರ ಪಕ್ಕದ ಹಳೇಯ ಸೇತುವೆಯನ್ನು ನೋಡುತ್ತಾ ಕಣ್ಣಲ್ಲೇ ವಿದಾಯ ಹೇಳುತ್ತಿದ್ದರು. ಕಳೆದ ಮೂರು ದಶಕಗಳಿಂದ ಲಕ್ಷಾಂತರ ಮಂದಿಯನ್ನು ಹೊತ್ತು ದಾಟಿಸಿದ ಸೇತುವೆಗೆ ಈ ಭಾಗದ ಪ್ರಯಾಣಿಕರು ಮನಸ್ಸಿನಲ್ಲೇ ಧನ್ಯವಾದ ಹೇಳುತ್ತಿದ್ದಾರೆ.
ಹೆಬ್ಬಾಳೆಯಲ್ಲಿ ಮೊದಲಿದ್ದ ಸೇತುವೆಯು ಪದೇ ಪದೇ ಮುಳುಗಿ ಕೇವಲ ಯಾತ್ರಾರ್ಥಿಗಳಿಗಷ್ಟೇ ಅಲ್ಲ, ಸುತ್ತಮುತ್ತಲಿನ ಗ್ರಾಮಸ್ಥರಿಗೂ ತೊಂದರೆಯಾಗುತ್ತಿತ್ತು. 2018ರ ಮಳೆಗಾಲದಲ್ಲಿ ಸತತವಾಗಿ ಮಳೆ ಬಂದಿತ್ತು. ಆಗ, 22 ದಿನಗಳಲ್ಲಿ 6 ಬಾರಿ ಮುಳುಗಿತ್ತು. ಆಗ, ಜಿಲ್ಲಾ ಲೋಕೋಪಯೋಗಿ ಇಲಾಖೆಯು ದುರಸ್ತಿಯ ಕಡೆ ಗಮನ ಕೊಡಲಿಲ್ಲ. ಹಾಗಾಗಿ, ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯೇ ಸೇತುವೆಯ ದುರಸ್ತಿಯನ್ನು ಮಾಡಿಸಿತ್ತು.
ಹೊಸ ಸೇತುವೆಯಲ್ಲಿ ರಾಜ್ಯಪಾಲರ ಪ್ರಯಾಣ
ಹೊಸ ಸೇತುವೆಯ ಅಂತಿಮ ಹಂತದ ಕಾಮಗಾರಿಗೋಸ್ಕರ ಕಳೆದ ಎರಡು ತಿಂಗಳಿನಿಂದ ಇಲ್ಲಿ ಪ್ರಯಾಣವನ್ನು ತಡೆ ಹಿಡಿಯಲಾಗಿತ್ತು. ಬದಲಿ ಮಾರ್ಗವಾಗಿ ಹಳುವಳ್ಳಿ-ದಾರಿಮನೆ ಮುಖಾಂತರ ಕಡಿದಾದ ರಸ್ತೆಯಲ್ಲಿಸುತ್ತಿ ಬಳಸಿ ಹೊರನಾಡು ತಲುಪಬೇಕಿತ್ತು. ಹೊಸ ಸೇತುವೆಯಲ್ಲಿ ಬುಧವಾರವಷ್ಟೆ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಿದ್ದು ಗುರುವಾರ ಹೊರನಾಡಿನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಈ ಸೇತುವೆ ಮೇಲೆಯೇ ಪ್ರಯಾಣ ಬೆಳೆಸಿದರು.
ಕಳಸ-ಹೊರನಾಡು ಮಾರ್ಗದ ಹೆಬ್ಬಾಳೆಯಲ್ಲಿ10.50 ಕೋಟಿ ರೂ. ವೆಚ್ಚದ ಸೇತುವೆ ನಿರ್ಮಾಣವಾಗಿ ಸಾರ್ವಜನಿಕರ ಪ್ರಯಾಣಕ್ಕೆ ಮುಕ್ತವಾಗಿದೆ. ಇದೇ ರೀತಿ ಕಳಸ-ಬಾಳೆಹೊನ್ನೂರು ಮಧ್ಯೆ ಕಗ್ಗನಳ್ಳ ಎಂಬಲ್ಲಿರಾಜ್ಯ ಸರಕಾರದಿಂದ 3.30 ಕೋಟಿ ರೂ. ವೆಚ್ಚದ ಸೇತುವೆ, ಕಗ್ಗನಳ್ಳ ಬಳಿ ಭದ್ರಾ ನದಿಗೆ 9 ಕೋಟಿ ರೂ. ವೆಚ್ಚದ ತೂಗು ಸೇತುವೆ, ನೆಲ್ಲಿಬೀಡು ಮುಖ್ಯ ರಸ್ತೆಯ ಮುಳುಗು ಸೇತುವೆ ಇದ್ದಲ್ಲಿ2.50 ಕೋಟಿ ರೂ. ವೆಚ್ಚದ ಹೊಸ ಸೇತುವೆ, ನೆಲ್ಲಿಬೀಡು- ಈಚಲುಹೊಳೆ ಮಾರ್ಗದಲ್ಲಿ17.50 ಕೋಟಿ ರೂ. ವೆಚ್ಚದ ಸೇತುವೆ ನಿರ್ಮಾಣವಾಗಲಿದೆ ಎಂದು ಶಾಸಕಿ ನಯನ ಮೋಟಮ್ಮ ತಿಳಿಸಿದ್ದಾರೆ.